Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಕಳ್ಳತನಕ್ಕೆ ಯತ್ನ: ಗುಂಡು ಹಾರಿಸಿದ ಪೊಲೀಸರು

ಮನೆಯಲ್ಲಿ ಕಳ್ಳತನಕ್ಕೆ ಯತ್ನ: ಗುಂಡು ಹಾರಿಸಿದ ಪೊಲೀಸರು
ಬೆಂಗಳೂರು , ಮಂಗಳವಾರ, 27 ಜನವರಿ 2015 (12:36 IST)
ಇಲ್ಲಿನ ಮನೆಯೊಂದರಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್ನಲ್ಲಿ ನಡೆದಿದೆ. 
 
ಘಟನೆಯು ಇಂದು ಬೆಳಗಿನ ಜಾವ 5.15ರ ವೇಳೆಯಲ್ಲಿ ನಡೆದಿದ್ದು, ಪೊಲೀಸ್ ಗುಂಡೇಟಿಗೆ ಒಳಗಾದ ಕಳ್ಳರನ್ನು ಮಿಥುನ್ ಹಾಗೂ ಅಖಿಲ್ ಎನ್ನಲಾಗಿದೆ. 
ಯಾರೂ ಇಲ್ಲದ ವೇಳೆಯನ್ನು ಗಮನಿಸಿದ ಕಳ್ಳರು, ತಮಿಳುನಾಡು ಮೂಲದ ನಿವೃತ್ತ ಎಂಜಿನಿಯರ್ ಮುರಳಿ ಮೋಹನ್ ಅವರ ಮನೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಇದನ್ನು ಕಂಡ ಮನೆ ಮಾಲೀಕ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ. 
 
ಬಳಿಕ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಕಳ್ಳರನ್ನು ಹಿಡಿಯಲೆತ್ನಿಸಿದ್ದಾರೆ. ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳರು, ಈ ವೇಳೆ ಪೊಲೀಸ್ ತಂಡದಲ್ಲಿದ್ದ ಮುಖ್ಯ ಪೇದೆಯೋರ್ವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐ ಪುನಿತ್, ಕಳ್ಳರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡುಗಳು ಕಳ್ಳರ ಕಾಲಿಗೆ ತಗುಲಿದ ಕಾರಣ ಕಳ್ಳರು ಸಾಕಷ್ಟು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಇಬ್ಬರೂ ಕಳ್ಳರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಇನ್ನು ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada