Select Your Language

Notifications

webdunia
webdunia
webdunia
webdunia

ಸಿಎಂ ಯಾರಾಗಬೇಕು ಎನ್ನುವ ಚಿಂತನೆ ಸ್ವಾಮಿಜಿಗಳಿಗೆ ಬೇಡ: ಸಚಿವ ಅಂಜನೇಯ

ಸಿಎಂ ಯಾರಾಗಬೇಕು ಎನ್ನುವ ಚಿಂತನೆ ಸ್ವಾಮಿಜಿಗಳಿಗೆ ಬೇಡ: ಸಚಿವ ಅಂಜನೇಯ
ಚಿತ್ರದುರ್ಗ , ಗುರುವಾರ, 26 ಫೆಬ್ರವರಿ 2015 (18:34 IST)
ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಪ್ರತಿಕ್ರಿಯಿಸಿದ್ದ ತುಮಕೂರಿನ ಷಡಕ್ಷರಿ ಮಠದ ರುದ್ರಮುನಿ ಶ್ರೀಗಳ ಹೇಳಿಕೆ ಬಗ್ಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಪ್ರತಿಕ್ರಿಯಿಸಿದ್ದು, ಸ್ವಾಮೀಜಿಗಳು ಪಕ್ಷದ ಆಂತರಿಕ ವಿಷಯಗಳಿಗೆ ತಲೆ ತೂರಿಸದೆ ಆಶೀರ್ವಾದ ಮಾಡಿಕೊಂಡೇ ಇರಲಿ ಎನ್ನುವ ಮೂಲಕ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂದು ಶ್ರೀಗಳು ಹೇಳಿಕೆ ನೀಡಿದ್ದಾರೆ. ಆದರೆ ಪಕ್ಷದ ಆಂತರಿಕ ವಿಷಯಗಳಲ್ಲಿ ತಲೆ ತೂರಿಸಿ ಮಾತನಾಡುವುದನ್ನು ಸ್ವಾಮೀಜಿಗಳು ನಿಲ್ಲಿಸಬೇಕು. ಪಕ್ಷದ ಚಲನವಲನಗಳ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಅಲ್ಲದೆ ಸ್ವಾಮೀಜಿಗಳು ಕೇವಲ ಭಕ್ತರಿಗೆ ಆಶೀರ್ವಚನ ಮಾಡಿಕೊಂಡು ಸುಮ್ಮನಿರಬೇಕು. ಒಂದು ವೇಳೆ, ಸಚಿವರು ಅಥವಾ ಪಕ್ಷದ ಸದಸ್ಯರು ತಪ್ಪುದಾರಿ ಹಿಡಿದಿದ್ದಲ್ಲಿ ಅವರು ನಮಗೆ ಸಲಹೆ ನೀಡಲಿ, ಅದನ್ನು ನಾವು ತುಂಬು ಮನಸ್ಸಿನಿಂದ ಸ್ವೀಕರಿಸುತ್ತೇವೆ. ಆದರೆ ಪಕ್ಷದ ಆಂತರಿಕ ವಿಚಾರಗಳಲ್ಲಿ ತಲೆ ತೂರಿಸಬಾರದು ಎಂದರು.
 
ನಿನ್ನೆ ತುಮಕೂರಿನ ಸಮಾರಂಭವೊಂದರಲ್ಲಿ ಮಾತನಾಡಿದ್ದ ರುದ್ರಮುನಿ ಶ್ರೀಗಳು, ದಲಿತರು ರಾಜ್ಯದ ಮುಖ್ಯಮಂತ್ರಿಯಾಗುವುದು ಅಗತ್ಯವಿದೆ. ಅಲ್ಲದೆ ಪಕ್ಷದ ಪ್ರಾದೇಶಿಕ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಅರ್ಹತೆವುಳ್ಳವರಾಗಿದ್ದು, ಅವರಿಗೆ ಸಿಎಂ ಸ್ಥಾನವನ್ನು ನೀಡಬೇಕು ಎಂಬುದು ನಮ್ಮೆಲ್ಲರ ಹೆಬ್ಬಯಕೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada