Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿ ಶೂಟೌಟ್ ಪ್ರಕರಣ: ಆರೋಪಿಯ ಬಂಧನ, ತನಿಖೆ

ವಿದ್ಯಾರ್ಥಿನಿ ಶೂಟೌಟ್ ಪ್ರಕರಣ: ಆರೋಪಿಯ ಬಂಧನ, ತನಿಖೆ
ಬೆಂಗಳೂರು , ಬುಧವಾರ, 1 ಏಪ್ರಿಲ್ 2015 (16:51 IST)
ನಗರದ ಕಾಡುಗೋಡಿಯಲ್ಲಿನ ಪ್ರಗತಿ ಕಾಲೇಜಿನಲ್ಲಿ ನಿನ್ನೆ ನಡೆದಿದ್ದ ವಿದ್ಯಾರ್ಥಿನಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಮಹೇಸ್.ಕೆ ಎಂಬಾತನನ್ನು ಪೊಲೀಸರು ಇಂದು ನಗರದ ಬಿ.ನಾರಾಯಣಪುದಲ್ಲಿನ ಅಕ್ಕನ ಮನೆಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 
 
ಮೂಲಗಳ ಪ್ರಕಾರ, ಈತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಬರುವ ಕೆಂದಾಳಬೈಲು ಗ್ರಾಮದ ನಿವಾಸಿ ಎನ್ನಲಾಗಿದ್ದು, ಸೂಕ್ಷ್ಮ ಮನಸ್ಸಿನ ವ್ಯಕ್ತಿ ಎನ್ನಲಾಗಿದೆ. ಅಲ್ಲದೆ ಸೂಕ್ಷ್ಮ ಮನಸ್ಸಿನ ವ್ಯಕ್ತಿ ಎಂಬ ಕಾರಣಕ್ಕೆ ತನ್ನ ಹುಟ್ಟೂರಿನಲ್ಲಿ ಆತನಿಗೆ ಯಾರೂ ಕೂಡ ಸ್ನೇಹಿತರಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಗುಳೆ ಬಂದಿದ್ದ ಎನ್ನಲಾಗಿದೆ.
 
ಆಂಗ್ಲ ಭಾಷೆಯಲ್ಲಿ ಉತ್ತಮ ವಾಗ್ಮಿಯಾಗಿದ್ದ ಮಹೇಶ್, ಬಳಿಕ ಪ್ರಗತಿ ಕಾಲೇಜಿನಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲದೆ ಕೆಲಸಕ್ಕಾಗಿ ಬಿ.ನಾರಾಯಣಪುರದಲ್ಲಿರುವ ತನ್ನ ಅಕ್ಕನ ಮನೆಯಿಂದಲೇ ಸಂಚರಿಸುತ್ತಿದ್ದ ಎನ್ನಲಾಗಿದೆ. 
 
ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಉತ್ತಮ ರೀತಿಯಲ್ಲಿ ಮಾತನಾಡುತ್ತಿದ್ದ ಆರೋಪಿ ವಿದ್ಯಾರ್ಥಿನಿಯರಿಗೆ ಪೋಷಕರಂತೆ ಹಲವು ಸಲಹೆಗಳನ್ನೂ ನೀಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಈ ಕೃತ್ಯ ಎಸಗಿದ್ದು, ಹಲವು ಅನುಮಾನಗಲಿಗೆ ಎಡೆ ಮಾಡಿಕೊಡುತ್ತಿದ್ದು, ಹತ್ಯೆ ಮಾಡುವ ಉದ್ದೇಶದಿಂದಲೇ ಪಿಸ್ತೂಲನ್ನು ತಂದು ಗೌತಮಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  
 
ಇನ್ನು ಆರೋಪಿ ಮಹೇಶ್ ಅವರ ತಂದೆ ಮತ್ತು ತಾಯಿ ಇಬ್ಬರೂ ಕೂಡ ಈಗಾಗಲೇ ಇಹಲೋಕ ತ್ಯಜಿಸಿದ್ದು, ಆರೋಪಿಗೆ ಇಬ್ಬರು ಅಕ್ಕಂದಿರು ಹಾಗೂ ಓರ್ವ ಅಣ್ಣ ಇದ್ದಾರೆ. ಮಹೇಶ್ ಕೊನೆಯ ಪುತ್ರನಾಗಿದ್ದ.  
 
ನಿನ್ನೆ ನಡೆದಿದ್ದ ಈ ಶೂಟೌಟ್ ಪ್ರಕರಣದಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ(18) ಮೃತಪಟ್ಟು, ಆಕೆಯ ಸ್ನೇಹಿತೆ ಶಿರಿಶಾ ಗಾಯಗೊಂಡಿದ್ದಳು.

Share this Story:

Follow Webdunia kannada