ಕಣಿವೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಕ್ರಿಕೆಟಿಗ ನವ್ ಜೋತ್ ಸಿಂಗ್ ಸಿಧು ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಇಂದು ಇಲ್ಲಿನ ಬೊಹಾರ್ ಕ್ಯಾಂಪ್ನಲ್ಲಿ ನಡೆದಿದೆ.
ಚುನಾವಣೆ ಹಿನ್ನೆಲೆ ಇಲ್ಲಿನ ಬೊಹಾರ್ ಕ್ಯಾಂಪ್ ಎಂಬಲ್ಲಿ ಚುನಾವಣಾ ರ್ಯಾಲಿಯನ್ನು ಏರ್ಪಡಿಸಲಾಗಿತ್ತು. ಇಲ್ಲಿ ಸಿಧು ಭಾಷಣ ಮಾಡಲಿದ್ದರು. ಆದರೆ ಈ ವಿಕೃತ ಘಟನೆ ಹಿನ್ನೆಲೆಯಲ್ಲಿ ರ್ಯಾಲಿಯನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಘಟನೆಯಲ್ಲಿ ಸಿಧುಗೆ ಯಾವುದೇ ರೀತಿಯಾದ ಗಾಯಗಳಾಗಿಲ್ಲವಾದರೂ ಇವರ ಭದ್ರತೆಗಾಗಿ ತೆರಳಿದ್ದ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಉದ್ರಿಕ್ತವಾಗಿ ವರ್ತಿಸಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಈ ಹಿಂದೆ ಸಿಖ್ ಸಮುದಾಯದ ಬಗ್ಗೆ ಸಿಧು ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾಗಿದ್ದು, ಇದೇ ಈ ಕೃತ್ಯಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.