ಸೂಟಕೇಸ್ ತುಂಬಿಸಿ ದೆಹಲಿಗೆ ಕೊಟ್ಟು ಬರುವ ಹಕ್ಕಬುಕ್ಕರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ವಿಶೇಷ ವಿಮಾನದಲ್ಲಿ ತೆರಳಿ ದೆಹಲಿಯಲ್ಲಿರುವವರಿಗೆ ಕಪ್ಪು ಕಾಣಿಕೆ ನೀಡಿ ಬರುತ್ತಾರೆ. ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡದ ಇವರು, ನಾನು ಕುರುಬ ಸಮಾಜದ ಸಿಂಹ, ದಲಿತ ನಾಯಕನೆಂದು ಬೊಬ್ಬೆ ಹೊಡಿಯುತ್ತಾರೆ. ನಿಮ್ಮ ಸಾಧನೆ ಏನು ಎಂದು ರಾಜ್ಯದ ಜನತೆಗೆ ಗೊತ್ತು ಎಂದು ರಾಜ್ಯ ಸರಕಾರದ ವಿರುದ್ಧ ಗುಡುಗಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. 2010 ರ ಸಾಲಿನ ಬ್ಯಾಚ್ನಲ್ಲಿ ನೇಮಕವಾದ ಅಧಿಕಾರಿಗಳು ಶಾಪಗ್ರಸ್ಥರೇನೊ ಗೊತ್ತಿಲ್ಲ. ಆ ಸಾಲಿನಲ್ಲಿ ನೇಮಕವಾದ ಅನುಪಮಾ ಶೆಣೈ ಹಾಗೂ ಕಲ್ಲಪ್ಪ ಹಂಡಿಭಾಗ್ ಅವರಿಗೆ ಆಗಿರುವ ಕಿರುಕುಳ ಕುರಿತು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ದಲಿತ ಮಹಿಳಾ ಅಧಿಕಾರಿ. ದಲಿತ ಮಹಿಳಾ ಅಧಿಕಾರಿಗೆ ರಕ್ಷಣೆ ನೀಡದ ರಾಜ್ಯ ಸರಕಾರ ಸಾಮಾನ್ಯ ದಲಿತ ಮಹಿಳೆಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ. ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಆಗ ಮಾತ್ರ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.