ಚಿತ್ರದುರ್ಗದ ಚಳ್ಳಕೆರೆಯಲ್ಲಿ ಹಿರಿಯೂರು ಕಾಂಗ್ರೆಸ್ ಶಾಸಕ ಡಿ.ಸುಧಾಕರ್ ಅವರ ಪುತ್ರಿ ಸ್ಫೂರ್ತಿಯವರ ಅದ್ಧೂರಿ, ಆಡಂಬರದ ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಭಾಗಿಯಾಗುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ವಿವಾಹ ಸಭಾಮಂಟಪಕ್ಕೆ ಮೂರು ಕೋಟಿ ರೂ. ಖರ್ಚು ಮಾಡಲಾಗಿದೆ. ಮದುವೆ ವೆಚ್ಚ 8ರಿಂದ 10 ಕೋಟಿ ರೂ. ಖರ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ತುಮಕೂರು ಮೂಲದ ನಿತೀಶ್ ಜತೆ ಸ್ಫೂರ್ತಿ ಸಪ್ತಪದಿ ತುಳಿದಿದ್ದಾರೆ. ಅದ್ಧೂರಿ ಮದುವೆಯಲ್ಲಿ ತಾವು ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಅದ್ಧೂರಿ ಮದುವೆ ನಿಗ್ರಹಕ್ಕೆ ಒಂದು ಖಾಸಗಿ ವಿಧೇಯಕ ಮಂಡಿಸಲಾಗಿದೆ. ಅದಿನ್ನೂ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಅವರು ಹೇಳಿದ್ದನ್ನು ಗಮನಿಸಿದಾಗ, ಕಾಯ್ದೆ ಇನ್ನೂ ಜಾರಿಗೆ ಬರದಿರುವುದರಿಂದ ಅವರು ವಿವಾಹದಲ್ಲಿ ಭಾಗಿಯಾಗಿದ್ದಾರೆಂದು ಅರ್ಥೈಸಬಹುದು.
ಡಿ.ಸುಧಾಕರ್ ತಮ್ಮ ಮಗಳ ಅದ್ಧೂರಿ ಮದುವೆಯನ್ನು ಸಮರ್ಥಿಸಿಕೊಳ್ಳುತ್ತಾ ನಾನೂ ಕೂಡ ಸರಳವಿವಾಹದ ಪರವಾಗಿದ್ದೇನೆ. ಆದರೆ ನಮ್ಮ ಭಾಗದ ಜನರ ಒತ್ತಡದ ಮೇಲೆ ಅದ್ಧೂರಿ ವಿವಾಹ ಮಾಡಿದ್ದೇನೆ ಎಂದು ಹೇಳಿದ್ದಾರೆ.