ನೋಟುಗಳ ವಿನಿಮಯದ ವೇಳೆ ಹಣ ಕಳ್ಕೊಂಡಿದ್ದಕ್ಕೆ ಬೇಸತ್ತುಕೊಂಡ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದ ಪ್ರಕರಣಕ್ಕೆ ಹೊಸ ಟ್ವೀಟ್ ಸಿಕ್ಕಿದೆ. ಅವರದು ಸಹಜ ಸಾವು, ಆತ್ಮಹತ್ಯೆಯಲ್ಲ ಎಂದು ತಿಳಿದುಬಂದಿದೆ. ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಗುಡಿಬಂಡೆ ತಾಲ್ಲೂಕಿನ ಚೆಂಡೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ನಿನ್ನೆ ಈಶ್ವರಮ್ಮ ಹಣ ವಿನಿಮಯ ಮಾಡಿಕೊಳ್ಳಲು ಗುಡಿಬಂಡೆಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್ಗೆ ಹೋಗಿದ್ದರು. ನೂಕು ನುಗ್ಗಲಿನಲ್ಲಿ ಆಕೆ ಹಣವನ್ನು ಕಳೆದುಕೊಂಡಿದ್ದು, ಈ ಕುರಿತು ಬ್ಯಾಂಕ್ನವರಿಗೆ ದೂರು ನೀಡಿದಾಗ ಅವರು ನಮ್ಮಲ್ಲಿ ಸಿಸಿ ಕ್ಯಾಮರಾ ಇಲ್ಲವೆಂದು ಹೇಳಿದ್ದಾರೆ.
ಕಳೆದ 6 ತಿಂಗಳ ಹಿಂದೆ ಮನೆಯನ್ನು ಕಳೆದುಕೊಂಡಿದ್ದ ಈಶ್ವರಮ್ಮ ಮತ್ತೀಗ ಇದ್ದ ಹಣವನ್ನು ಸಹ ಕಳೆದುಕೊಂಡು ನೊಂದಿದ್ದರು. ಈ ಕುರಿತು ವಿಪರೀತ ಚಿಂತೆ ಮಾಡಿದ್ದ ಅವರು ಅದೇ ಆಘಾತದಿಂದ ರಾತ್ರಿ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಪರಿಹಾರದ ಆಶೆಗೆ ಆಕೆಯ ಮನೆಯವರು ಇದು ಆತ್ಮಹತ್ಯೆ ಎಂಬ ಕಟ್ಟುಕತೆಯನ್ನು ಕಟ್ಟಿದ್ದರು. ಬಹಳ ಬಡ ಕುಟುಂಬದವಾದ್ದರಿಂದ ಊರಿನ ಹಿರಿಯರೇ ಈ ಸುಳ್ಳುಕತೆ ಸೃಷ್ಟಿಸುವ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.