ಬೆಳಗಾವಿಯ ಯಳ್ಳೂರು ಗ್ರಾಮದಲ್ಲಿ ಮಹಾರಾಷ್ಟ್ರದ ರಾಜ್ಯ ನಾಮಫಲಕ ತೆಗೆಸಿದ್ದಕ್ಕೆ ಪ್ರತೀಕಾರವಾಗಿ ಕೊಲ್ಹಾಪುರದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ದಾಳಿ ಮಾಡಿದ ಶಿವಸೇನೆ ಕಾರ್ಯಕರ್ತರು ಬಸ್ ಮುಂಭಾಗದ ಗಾಜನ್ನು ಪುಡಿ, ಪುಡಿ ಮಾಡಿದರಲ್ಲದೇ ದೊಣ್ಣೆಗಳಿಂದ ಬಸ್ಸುಗಳಿಗೆ ಹೊಡೆದ ಘಟನೆ ನಡೆದಿದೆ.
ಶಿವಸೇನೆ ಪುಂಟಾಟಕ್ಕೆ ರಾಜ್ಯದ ಐದಕ್ಕೂ ಹೆಚ್ಚು ಬಸ್ಗಳು ಸಂಪೂರ್ಣ ಜಖಂ ಆಗಿದೆ. ಇದರಿಂದಾಗಿ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಒಳಗೆ ಕುಳಿತಿದ್ದರೂ ಬಸ್ ಮೇಲೆ ದಾಳಿ ಮಾಡಿ ಪುಂಡಾಟಿಕೆ ಮಾಡಿದ್ದಾರೆ.
ಯಳ್ಳೂರು ಗ್ರಾಮದ ನಾಮಫಲಕದಲ್ಲಿ ಮಹಾರಾಷ್ಟ್ರದ ಯಳ್ಳೂರು ಎಂದು ಬರೆಯಲಾಗಿತ್ತು. ಯಳ್ಳೂರು ಗ್ರಾಮಪಂಚಾಯಿತಿ ನಾಮಫಲಕವನ್ನು ತೆಗೆಸಿಹಾಕಿದ್ದರಿಂದ ಶಿವಸೇನೆ ಪುಡಾರಿಗಳು ದಾಂಧಲೆ ನಡೆಸಲು ಮುಂದಾಗಿದ್ದಾರೆ.. ಶಿವಸೇನೆ ಕಾರ್ಯಕರ್ತರ ದಾಳಿ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಕೋಲ್ಹಾಪುರಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.