ಸರ್ಕಾರವು ಪದೇ ಪದೇ ಬೆಳಗಾವಿ ನಗರದಲ್ಲಿ ಅಧಿವೇಶನ ನಡೆಸುವ ಮೂಲಕ ಇಲ್ಲಿನ ಮರಾಠಿಗರ ಸ್ವಾತಂತ್ರಯ್ಕ್ಕೆ ಧಕ್ಕೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಎಂಇಎಸ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಲು ಸಜ್ಜಾಗಿದೆ.
ಒಂದು ಕಡೆ ನಗರದ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಸಂಬಂಧ ಚರ್ಚಿಸಲು ಸರ್ಕಾರ ಅಧಿವೇಶನ ಹಮ್ಮಿಕೊಂಡಿದ್ದರೆ, ಇತ್ತ ಮಹಾರಾಷ್ಟ್ರ ಮೂಲದ ಪಕ್ಷವಾಗಿರುವ ಎಂಇಎಸ್ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿದ್ದು, ಸರ್ಕಾರದ ವಿರುದ್ಧ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಭಟಿಸಲು ಸಜ್ಜಾಗಿದೆ.
ಕಾರ್ಯಕ್ರಮವು ನಗರದ ಮರಾಠಿ ಮಂದಿರದಲ್ಲಿ ಆಯೋಜಿಸಲಾಗಿದ್ದು, ಬೆಳಗಾವಿ ಧಕ್ಷಿಣ ವಿಭಾಗದ ವಿಧಾಸಭಾ ಸದಸ್ಯ ಸಂಭಾಜಿ ಪಾಟೀಲ್ ಹಾಗೂ ಮತ್ತೋರ್ವ ಖಾನಾಪುರ ಕ್ಷೇತ್ರದ ಶಾಸಕ ಅರವಿಂದ್ ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರವನ್ನು ದೂಷಿಸಲು ನಾಯಕರು ಮುಂದಾಗಿದ್ದಾರೆ.
ಪದೇ ಪದೇ ಬೆಳಗಾವಿಯಲ್ಲಿ ಅಧಿವೇಶನ ಆರಂಭಿಸುತ್ತಿರುವುದು ಎಂಇಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸಭೆಯಲ್ಲಿ ಶಾಸಕರು ಸ್ರಕಾರದ ವಿರುದ್ಧ ತಗಾದೆ ತೆಗೆಯಲಿದ್ದು, ಕರ್ನಾಟಕ ಸರ್ಕಾರದ ಕೆಲ ನಿರ್ಣಯಗಳ ವಿರುದ್ಧ ಕಿಡಿ ಕಾರಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದ್ದು, ಇದಕ್ಕೆ ಜಿಲ್ಲಾಡಳಿತ ಅಸಮ್ಮತಿ ತೋರಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.