ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಭಾನುವಾರ ಆರ್ಎಸ್ಎಸ್ ಕಾರ್ಯಕರ್ತನನ್ನು ಕೊಲೆಗೈಯ್ಯಲಾಗಿದ್ದು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತನನ್ನು ಆಟೋ ಚಾಲಕನಾಗಿದ್ದ ಪ್ರವೀಣ್ ಪೂಜಾರಿ (34) ಎಂದು ಗುರುತಿಸಲಾಗಿದೆ. ಬಾಡಿಗೆ ನೆಪದಲ್ಲಿ ಕರೆದುಕೊಂಡು ಹೋಗಿ ಗುಡ್ಡೆ ಹೊಸೂರು ಬಳಿ ಆತನನ್ನು ಹತ್ಯೆಗೈಯ್ಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಭಾನುವಾರ ರಾತ್ರಿ ನಗರದಲ್ಲಿ ಹಿಂದೂ ಜಾಗರಣ ವತಿಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ನಡೆದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ಪೂಜಾರಿ ಆಟೋದಲ್ಲಿ ಮನೆಗೆ ಹಿಂತಿರುಗುವಾಗ ದಾರಿ ಮಧ್ಯೆ ಆಟೋ ನಿಲ್ಲಿಸಿದ ಮೂವರು ಬಾಡಿಗೆ ನೆಪದಲ್ಲಿ ಹತ್ತಿಕೊಂಡಿದ್ದಾರೆ.
ಗುಡ್ಡೆಹೊಸೂರು ಗ್ರಾಮದ ತಿರುವು ಬರುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಸ್ಥಳದಲ್ಲೇ ಅಸುನೀಗಿದ್ದು ಘಟನೆಯನ್ನು ಕಂಢಿಸಿ ಆಟೋ ಚಾಲಕರ ಸಂಘ ಮತ್ತು ಹಿಂದೂ ಪರ ಸಂಘಟನೆಗಳು ತಾಲ್ಲೂಕು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು 144 ಸೆಕ್ಸನ್ ಜಾರಿಯಾಗಿದೆ.
ಬೂದಿಮುಚ್ಚಿದ ಕೆಂಡದಂತಿರುವ ನಗರದಲ್ಲಿ ಸೋಮವಾರ ಅನ್ಯ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಆಟೋ ಚಾಲಕನೊಬ್ಬ ದಾಳಿ ಮಾಡಿದ್ದಾನೆ.