ತನ್ನ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿದ್ದೀಯಾ ಎಂದು ಪ್ರಶ್ನಿಸಿದ ವ್ಯಕ್ತಿಯೋರ್ವನ ಎರಡೂ ಕೈಗಳನ್ನು ಮತ್ತೋರ್ವ ವ್ಯಕ್ತಿ ಕತ್ತರಿಸಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯಾ ಗ್ರಾಮದಲ್ಲಿ ನಡೆದಿದೆ.
ಕೃತ್ಯ ಎಸಗಿದ ವ್ಯಕ್ತಿಯನ್ನು ಗೋಪಾಲಗೌಡ ಎಂದು ತಿಳಿದು ಬಂದಿದ್ದು, ಈತ ಮುಖಕ್ಕೆ ಮೆಣಸಿನ ಹುಡಿ ಎರಚಿ ಸುಂದರ ಮಲೆಕುಡಿಯಾ ಎಂಬ ವ್ಯಕ್ತಿಯ ಎರಡೂ ಕೈಗಳನ್ನು ಕತ್ತರಿಸಿದ್ದಾನೆ. ಅಲ್ಲದೆ ಘಟನೆ ಬಳಿಕ ಗ್ರಾಮದಿಂದ ಪರಾರಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಗೋಪಾಲ್ ಗೌಡನ ದೌರ್ಜನ್ಯಕ್ಕೆ ಒಳಗಾಗಿರುವ ಸುಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆಗೆ ಜಮೀನು ಕಾರಣ ಎನ್ನಲಾಗುತ್ತಿದ್ದು, ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂಬ ಕಾರಣದಿಂದ ಪ್ರಶ್ನಿಸಿದ್ದಕ್ಕೆ ಈ ರೀತಿಯ ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು, ಗೋಪಾಲಗೌಡನ ಪತ್ನಿ ಸೇರಿ ಮತ್ತೋರ್ವನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಗೋಪಾಲಗೌಡ ತಾಲೂಕು ಪಂಚಾಯತ್ನ ಮಾಜಿ ಸದಸ್ಯ ಎಂದು ಹೇಳಲಾಗಿದೆ.