ಬೈಕ್ ಕಳ್ಳರ ಕೃತ್ಯಕ್ಕೆ ಪಿಎಸ್ಐ ಜಗದೀಶ್ ಅವರು ಬಲಿಯಾಗಿ ಇಂದಿಗೆ 11 ದಿನ ತುಂಬಿರುವ ಹಿನ್ನೆಲೆಯಲ್ಲಿ ಅವರ ಸಮಾಧಿ ಬಳಿಯಲ್ಲಿ ಇಂದು ಹಾಲು ಬಿಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಜಗದೀಶ್ ಅವರ ಸ್ವಗ್ರಾಮವಾದ ನೆಲಮಂಗಲ ತಾಲೂಕಿನ ಮಲ್ಲಾಪುರದಲ್ಲಿ ಆ ಕಾರ್ಯಕ್ರಮ ನಡೆಯುತ್ತಿದ್ದು, ಅಂತಿಮವಾಗಿ ಶಾಂತಿ ಕೋರುವ ಸಲುವಾಗಿ ಹೂವಿನ ಮಂಟಪ ನಿರ್ಮಾಣ ಮಾಡಲಾಗಿತ್ತು. ಜಗದೀಶ್ ಪತ್ನಿ ರಮ್ಯಾ ಸೇರಿದಂತೆ ಅವರ ಕುಟುಂಬಸ್ಥರು ಮತ್ತು ಇತರೆ ಸಂಬಧಿಕರು ಭಾಗವಹಿಸಿ ಸಮಾಧಿಗೆ ಪೂಜೆ ನೆರವೇರಿಸಿದರು. ಇನ್ನು ಇದೇ ಕಾರ್ಯಕ್ರಮವು ನಾಳೆಯೂ ಕೂಡ ನಡೆಯಲಿದ್ದು, ಗ್ರಾಮದ ಎಲ್ಲಾ ಗ್ರಾಮಸ್ಥರೂ ಕೂಡ ಜಗದೀಶ್ ಅವರ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ.
ಇನ್ನು ತಲೆಮರೆಸಿಕೊಂಡು ಓಡಾಡುತ್ತಿದ್ದ ಬೈಕ್ ಕಳ್ಳರನ್ನು ಹಿಡಿಯಲು ತಮ್ಮ ನಾಲ್ವರು ಸಿಬ್ಬಂದಿಗಳೊಂದಿಗೆ ಜಗದೀಶ್ ನೆಲಮಂಗಲ ನಗರಕ್ಕೆ ಅ.16ರಂದು ತೆರಳಿದ್ದರು. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹರೀಶ್ ಬಾಬು ಮತ್ತು ಮಧು ಎಂಬ ಆರೋಪಿಗಳು ಯತ್ನಿಸಿದ್ದರು. ಅವರನ್ನು ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಜಗದೀಶ್ ಕೊನೆಗೆ ಆರೋಪಿ ಹರೀಶ್ ಬಾಬುವಿನ ಕೃತ್ಯಕ್ಕೆ ಬಲಿಯಾಗಿದ್ದರು.