ಬೆಳಗಾವಿಯಲ್ಲಿ ಕಾನೂನು ಆಡಳಿತಾತ್ಮಕ ನ್ಯಾಯಾಂಗ ಮಂಡಳಿ(ಕೆಎಟಿ)ಯನ್ನು ತೆರೆಯುವಂತೆ 15 ದಿನಗಳಿಂದ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ್ದ ವಕೀಲರು ನಗರದಲ್ಲಿ ಇಂದು ಕಲ್ಲು ತೂರಾಟ ನಡೆಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಿದ ಸನ್ನಿವೇಶ ಕಂಡುಬಂತು.
ರಾಜ್ಯದ 6 ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ವಕೀಲರ ತಂಡ ಸರ್ಕಾರದ ಸಾಕಷ್ಟು ಆಸ್ತಿಯನ್ನು ಹಾನಿಗೊಳಿಸಿದೆ. ಅಲ್ಲದೆ ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎನ್ನಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 2 ಗಂಟೆಗಳ ಕಾಲ ಕೈಗೊಂಡಿದ್ದ ಈ ಪ್ರತಿಭಟನೆ ಪರಿಣಾಮ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥವಾಗಿ ಸಾರ್ವಜನಿಕರು ಪರದಾಡುವಂತಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ವಕೀಲರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ವಕೀಲರ ತಂಡ ಪ್ರಸ್ತುತ ಪ್ರತಿಭಟನೆಗಿಳಿದಿದೆ.