ರಾಜ್ಯದ ಹೆಸರಾಂತ ಕಾದಂಬರಿಕಾರರು, ಸಾಹಿತಿಗಳು ಆದ ಡಾ. ಎಸ್ ಎಲ್ ಭೈರಪ್ಪ ಅವರ ಜನಪ್ರಿಯ ಕಾದಂಬರಿ ಪರ್ವ ಸಿನಿಮಾ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ಜೀವಂತವಾಗಿ ಮೂಡಿಬರಲಿದೆ.
ಟಾಲಿವುಡ್ನ ನಂಬರ್ ಒನ್ ನಿರ್ದೇಶಕರಾದ ರಾಜಮೌಳಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ಮೂಲಗಳ ಪ್ರಕಾರ ರಾಜಮೌಳಿ ಕೆಲ ದಿನಗಳ ಹಿಂದೆ ಕನ್ನಡ ಕಾದಂಬರಿ ಪರ್ವ ಆಧರಿಸಿದ ಸಿನಿಮಾವನ್ನು ನಿರ್ದೇಶಿಸಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಹಿಂದೂ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ರಚಿಸಲಾದ ಈ ಕಾದಂಬರಿ ಇಂಗ್ಲೀಷ್ ಭಾಷೆಗು ಕೂಡ ಅನುವಾದಗೊಂಡಿದೆ. ಇದನ್ನು ಚಲನಚಿತ್ರವನ್ನಾಗಿಸಲು ನಿರ್ಧರಿಸಿರುವ ರಾಜಮೌಳಿ ಆ ಕುರಿತು ಭೈರಪ್ಪನವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿದ್ದಾರೆಯೇ ಎಂಬುದು ಖಚಿತವಾಗಿಲ್ಲ.
ಈ ಹಿಂದೆ, ಡಾ. ಭೈರಪ್ಪನವರ ಕಾದಂಬರಿ 'ವಂಶವೃಕ್ಷ' ಅನಿಲ್ ಕಪೂರ್ ಅಭಿನಯದಲ್ಲಿ, 'ವಂಶವೃಕ್ಷಂ' ಶೀರ್ಷಿಕೆಯಡಿ ಬಾಪು ನಿರ್ದೇಶನದಡಿಯಲ್ಲಿ ತೆಲುಗು ಭಾಷೆಯಲ್ಲೇ ಚಿತ್ರೀಕರಣಗೊಂಡಿತ್ತು. ಕನ್ನಡ ಚಲನಚಿತ್ರ ನಿರ್ದೇಶಕರು ಸಹ ಭೈರಪ್ಪನವರ ಕಾದಂಬರಿ ಆಧರಿಸಿ ಸಿನೆಮಾ ನಿರ್ದೇಶಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.