ಬೆಂಗಳೂರಿನ ಆರ್.ಟಿ. ನಗರ ಪೊಲೀಸರು ಪುತ್ರ ಕಾರ್ತಿಕ್ ಗೌಡರನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ಮೈತ್ರಿಯಾ ವಂಚನೆ ಮತ್ತು ಅತ್ಯಾಚಾರದ ದೂರನ್ನು ನೀಡಿದ ಬಳಿಕ ಪೊಲೀಸರು ಮೈತ್ರಿಯಾ ವಿಚಾರಣೆ ನಡೆಸಿದರು ಮತ್ತು ವೈದ್ಯಕೀಯ ಪರೀಕ್ಷೆಗೆ ಅವರನ್ನು ಒಳಪಡಿಸಿದ್ದರು.
ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಅತ್ಯಾಚಾರ ನಡೆದ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ ಮತ್ತು ಎರಡು ತಿಂಗಳ ಹಿಂದೆ ಲೈಂಗಿಕ ಕ್ರಿಯೆ ನಡೆದಿರುವ ಬಗ್ಗೆ ವರದಿಯಲ್ಲಿ ದೃಢಪಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ತಿಕ್ ಗೌಡ ಅವರ ವೈದ್ಯಕೀಯ ಪರೀಕ್ಷೆ ನಡೆಸುವುದಕ್ಕಾಗಿ ಅವರಿಗೆ ನೋಟಿಸ್ ನೀಡಿದ್ದರೂ ಅವರು ಪೊಲೀಸರ ಎದುರು ಹಾಜರಾಗದಿರುವುದರಿಂದ ಕಾರ್ತಿಕ್ ತಂದೆ ಸದಾನಂದ ಗೌಡರಿಗೇ ಆರ್. ಟಿ.ನಗರ ಪೊಲೀಸರು ನೋಟಿಸ್ ಜಾರಿ ಮಾಡಿ ಪುತ್ರನನ್ನು ಹಾಜರುಪಡಿಸುವಂತೆ ತಿಳಿಸಿದ್ದಾರೆ.