ಎಮ್ಇಎಸ್ ಮತ್ತು ಶಿವಸೇನಾದವರ ಪುಂಡಾಡಿಕೆಯನ್ನು ಖಂಡಿಸಿ ಅಲ್ಲಿ ಸಮಾವೇಶ ನಡೆಸಿ ಎಮ್ಇಎಸ್ ಪುಂಡಾಡಿಕೆಗೆ ಸೆಡ್ಡು ಹೊಡೆಯುವ ನಿರ್ಧಾರದಿಂದ ರಾಜ್ಯದ ವಿವಿಧ ಕಡೆಗಳಿಂದ ಹೊರಟಿದ್ದ 50 ಕ್ಕೂ ಹೆಚ್ಚು ಕಾರ್ಯಕರ್ತರ ಸಮೇತ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಪೋಲಿಸರು ಬಂಧಿಸಿದ್ದಾರೆ. ಯಳ್ಳೂರಿನಲ್ಲಿ ಕನ್ನಡ ಧ್ವಜ ಹಾರಿಸಲು ಕರವೇ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಗೌಡ ಕನ್ನಡ ಧ್ವಜ ಹಾರಿಸಲು ನಮ್ಮನ್ಯಾರು ತಡೆಯಲಾರರು. ಪ್ರಜಾಪ್ರಭುತ್ವ ಸರಕಾರವಿದೆಯೋ ಅಥವಾ ಬ್ರಿಟಿಶ್ ಸರಕಾರವಿದೇಯೋ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಯಳ್ಳೂರಿಗೆ ಹೊರಟಿದ್ದ 50 ಕ್ಕೂ ಹೆಚ್ಚು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿಯ ಚಳಗೇರಿ ಟೋಲಗೇಟ್ ಬಳಿ ಕುಮಾರಪಟ್ಟಣಂ ಪೋಲಿಸರು ಬಂಧಿಸಿದ್ದಾರೆ.
ಅಲ್ಲದೇ ಗುಲಬರ್ಗಾದಿಂದ ಹೊರಟ ಬಳಿ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬೆಳಗಾವಿಯ ನೇಸರ್ಗಿ ಬಳಿ ಪೋಲಿಸರು ತಡೆದಿದ್ದಾರೆ. ಬೆಳಗಾವಿಯಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿದ್ದು, ಬೈಕ್ ಸೇರಿದಂತೆ ಯಳ್ಳೂರು ಕಡೆ ಹೊರಟ ಪ್ರತಿ ವಾಹನವನ್ನು ತಪಾಸಣೆಗೊಳಪಡಿಸಿ ಬಿಡಲಾಗುತ್ತದೆ.
3,000 ಕ್ಕಿಂತ ಹೆಚ್ಚು ಕರವೇ ಕಾರ್ಯಕರ್ತರು ಯಳ್ಳೂರು ಚಲೋ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಬೆಳಗಾವಿಯಿಂದ ಯಳ್ಳೂರಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. ಯಳ್ಳೂರಿನಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದ್ದು, ಕರವೇ ಕಾರ್ಯಕರ್ತರು ಅಲ್ಲಿಗೆ ತಲುಪಿದರೆ ನಡೆಯಬಹುದಾದ ಭಾರೀ ಗಲಭೆಯನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ಪೋಲಿಸರು ಈ ಕ್ರಮ ಕೈಗೊಂಡಿದ್ದಾರೆ.