ಭದ್ರಾವತಿಯ ನಿವಾಸಿ ದೀಪಾ ಎಂಬ ಯುವತಿಯನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ದೀಪಾ ಪೊಲೀಸ್ ಕೆಲಸ ಸಿಕ್ಕಿರುವುದಾಗಿ ಹೇಳಿ ತಂದೆ ಪುಟ್ಟೆಗೌಡ,ತಾಯಿ ಭಾಗ್ಯಮ್ಮ ಎಂಬರಿಗೆ ವಂಚಿಸಿ, ಒಂದೂವರೆ ಲಕ್ಷ ರೂ. ಪಂಗನಾಮ ಹಾಕಿದ್ದಳು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ದೀಪಾ ತಂದೆ, ತಾಯಿಗಳಿಂದ ಎನ್ಸಿಸಿಗೆ ಸೇರುವುದಾಗಿ 5000 ರೂ. ತೆಗೆದುಕೊಂಡು ಮೈಸೂರಿಗೆ ಹೋಗಿ ನಾಲ್ಕು ದಿನಗಳ ನಂತರ ವಾಪಸು ಬಂದಿದ್ದಳು.ನಂತರ ಪೊಲೀಸ್ ಕೆಲಸ ಸಿಕ್ಕಿದೆಯೆಂದೂ, ಇಲಾಖೆಗೆ ಹಣ ಕೊಡಬೇಕೆಂದೂ ಹೇಳಿ ಸುಮಾರು ಒಂದೂವರೆ ಲಕ್ಷ ಹಣವನ್ನು ತೆಗೆದುಕೊಂಡು ತಂದೆ, ತಾಯಿಗಳಿಗೆ ವಂಚಿಸಿದ್ದಳು.
ಇದಲ್ಲದೇ ಊರಿನ ಕೆಲವು ಜನರ ಬಳಿಯೂ ತಾನು ಪೊಲೀಸ್ ಎಂದು ಹೇಳಿ ಹಣ ತೆಗೆದುಕೊಂಡು ವಂಚಿಸಿದ್ದಳು. ಈ ಹಿನ್ನೆಲೆಯಲ್ಲಿ ದೀಪಾಳನ್ನು ಮತ್ತು ಅವಳ ಗೆಳೆಯ ಆಟೋ ಚಾಲಕ ಸುರೇಶ್ ಎಂಬವನನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.