ಕೂಡ್ಲಿಗಿಯಿಂದ ಎತ್ತಂಗಡಿಯಾಗಿದ್ದ ಅನುಪಮಾ ಶೆಣೈ ಕೂಡ್ಲಿಗಿಗೆ ಮತ್ತೆ ವರ್ಗಾವಣೆಯಾಗಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅನುಪಮಾರನ್ನು ತಾವೇ ವರ್ಗಾವಣೆ ಮಾಡಿಸಿದ್ದು ಎಂಬ ಹೇಳಿಕೆ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅವರು ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆಗೆ ಸಂಬಂಧಿಸಿದಂತೆ ತಾವು ಗೃಹಸಚಿವರ ಜತೆ ಮಾತುಕತೆ ನಡೆಸಿದ್ದು, ಅನುಪಮಾರನ್ನು ಮತ್ತೆ ಕೂಡ್ಲಿಗಿಗೆ ಮರುನೇಮಕ ಮಾಡುವ ಭರವಸೆ ನೀಡಿದ್ದಾರೆಂದು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದರು.
ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ರಮ್ಯಾ ಈ ಕುರಿತು ಅನುಪಮಾ ಶೆಣೈ ಅವರಿಗೆ ನ್ಯಾಯ ಒದಗಿಸುವಂತೆ ತಿಳಿಸಿದಾಗ, ಅನುಪಮಾ ಶೆಣೈ ಅವರನ್ನು ಅದೇ ಸ್ಥಾನದಲ್ಲಿ ನಿಯೋಜಿಸುವುದಾಗಿ ಪರಮೇಶ್ವರ್ ಭರವಸೆ ನೀಡಿದ್ದಾರೆಂದು ರಮ್ಯಾ ಟ್ವೀಟ್ನಲ್ಲಿ ತಿಳಿಸಿದ್ದರು. ಇದಾದ ನಂತರ ಕೂಡ್ಲಿಗಿಗೆ ಅನುಪಮಾರನ್ನು ಮತ್ತೆ ವರ್ಗಾವಣೆ ಮಾಡಿರುವುದಾಗಿ ಬಳ್ಳಾರಿ ಎಸ್ಪಿ ಚೇತನ್ ಹೇಳಿದ್ದಾರೆ.
ಪರಮೇಶ್ವರ್ ನಾಯ್ಕ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿ ಕೂಡ್ಲಿಗಿಯಲ್ಲಿ ಜನರು ಪ್ರತಿಭಟನೆ ಮಾಡಿದ್ದಾರೆ. ಈ ನಡುವೆ ಹೈಕಮಾಂಡ್ ಕೂಡ ಪರಮೇಶ್ವರ್ ನಾಯ್ಕ್ ಮೇಲಿನ ಆರೋಪ ಕುರಿತು ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಸೂಚಿಸಿದೆ. ಪರಮೇಶ್ವರ್ ನಾಯ್ಕ್ ಅವರು ಅನುಪಮಾ ಶೆಣೈ ಅವರನ್ನು ತಾವೇ ವರ್ಗಾವಣೆ ಮಾಡಿಸಿದ್ದು ಎಂದು ಹೇಳಿಕೊಂಡಿದ್ದರು.