Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿಲ್ಲ: ಸಿದ್ದರಾಮಯ್ಯ

ಸುಪ್ರೀಂಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿಲ್ಲ: ಸಿದ್ದರಾಮಯ್ಯ
ಬೆಂಗಳೂರು , ಬುಧವಾರ, 1 ಏಪ್ರಿಲ್ 2015 (15:53 IST)
ಗಣಿಗಳಲ್ಲಿನ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂಬ ಹೇಳಿಕೆಗೆ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ ಯಾವುದೇ ರೀತಿಯಾಗಿ ಛೀಮಾರಿ ಹಾಕಿಲ್ಲ. ಮಾಹಿತಿ ನೀಡಿ ಎಂದಷ್ಟೇ ಹೇಳಿದೆ ಎಂದು ಸ್ವಯಂ ಪ್ರೇರಿತವಾಗಿ ಉತ್ತರಿಸಿದ್ದಾರೆ. 
 
ವಿಧಾನ ಪರಿಷತ್ ಕಲಾಪ ವೇಳೆಯಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಕೆಎಸ್.ಈಶ್ವರಪ್ಪ ಪ್ರತಿಕ್ರಿಯಿಸಿ ಗಣಿಗಳಲ್ಲಿನ ಅದಿರು ಹರಾಜು ಪ್ರಕ್ರಿಯೆ ವಿಷಯ ಸಂಬಂಧ ಸುಪ್ರೀಂ ಕೋರ್ಟ್ ನಿನ್ನೆ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಗುಡುಗಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾನು ಸರ್ಕಾರಿ ಪರ ವಾದ ಮಂಡಿಸಿದ್ದ ನಮ್ಮ ವಕೀಲರಿಂದ ಮಾಹಿತಿ ಪಡೆದಿದ್ದೇನೆ. ಆ ವಿಷಯವನ್ನಾಧರಿಸಿ ಸ್ವಯಂ ಪ್ರೇರಣೆಯ ಹೇಳಿಕೆಗಳನ್ನು ನೀಡುತ್ತಿದ್ದು, ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿಲ್ಲ. ಬದಲಾಗಿ ಪ್ರಕರಣದಲ್ಲಿ ಒಟ್ಟು 15 ಕಂಪನಿಗಳಿದ್ದು, ಅವುಗಳಲ್ಲಿ ಅದಿರಿರುವ ಸಂಬಂಧ ಸೂಕ್ತ ಮಾಹಿತಿ ನೀಡಿ ಎಂದಷ್ಟೇ ಸೂಚಿಸಿದೆ ಎಂದರು. 
 
ಬಳಿಕ ಮಾತನಾಡಿದ ಅವರು, ಒಟ್ಟು 15 ಕಂಪನಿಗಳಲ್ಲಿ 6 ಕಂಪನಿಗಳಲ್ಲಿರುವ ಅದಿರಿನ ಸಂಪೂರ್ಣ ಮಾಹಿತಿ ಸರ್ಕಾರಕ್ಕಿದೆ. ಆದರೆ ಉಳಿದ 9 ಕಂಪೆನಿಗಳ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಅದಿರಿನ ಪ್ರಮಾಣದ ಬಗ್ಗೆ ಮಾಹಿತಿ ನೀಡಲು ಅದಿರಿನ ಪ್ರಮಾಣ ಹಾಗೂ ಗುಣಮಟ್ಟ ನಿರ್ಧರಿಸುವ ಕೇಂದ್ರ ಸರ್ಕಾರದ ಸಂಸ್ಥೆ ಎಂಇಪಿಎಲ್‌ಗೆ ತಿಳಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 60 ಕೋಟಿ ಬಿಡುಗಡೆಗೊಳಿಸಿದೆ. ಅಧಿಕಾರಿಗಳು ಕೂಡಲೇ ಮಾಹಿತಿ ನೀಡಲಿದ್ದಾರೆ ಎಂದು ವಿಧಾನ ಪರಿಷತ್‌ಗೆ ಸ್ವಯಂ ಪ್ರೇರಿತವಾಗಿ ಮಾಹಿತಿ ನೀಡಿದರು. 
 
ಬಳಿಕ, ಅದಿರು ಲೂಟಿಯಾಗಿರುವುದು ನಿಜ. ಒಂದು ಲಕ್ಷ ಕೋಟಿ ಮೌಲ್ಯದ ಅದಿರು ನಾಪತ್ತೆಯಾಗಿದೆ. ಆದರೆ ಅದು ಆಗಿರುವುದು ಕೇವಲ ಬಿಜೆಪಿ ಅವಧಿಯಲ್ಲಿ ಮಾತ್ರವೇ ಎಂದು ವಿರೋಧ ಪಕ್ಷದ ವಿರುದ್ಧ ಗುಡುಗಿದರು. 
 
ಪ್ರಕರಣದ ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಸರ್ಕಾರಕ್ಕೆ ತನ್ನಲ್ಲಿರುವ ಅದಿರಿನ ಬಗ್ಗೆ ಮಾಹಿತಿ ಇಲ್ಲ. ತಿಳಿದು ಕೊಳ್ಳುವ ಕಾಳಜಿಯೂ ಇಲ್ಲವಾದರೆ ವಿಚಾರಣೆ ನಡೆಸಲೂ ಕೂಡ ಖೇದ ಉಂಟಾಗುತ್ತದೆ ಎನ್ನುವ ಮೂಲಕ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿತ್ತು.  

Share this Story:

Follow Webdunia kannada