ನಿತ್ಯಾ ವಿರುದ್ಧದ ವಾರಂಟ್ ರದ್ದುಗೊಳಿಸಿರುವ ನ್ಯಾ.ಪಚ್ಚಾಪುರೆ ಅವರು, ಆಗಸ್ಟ್ 6ರಂದು ಬೆಳಗ್ಗೆ 10ಗಂಟೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಪುರುಷತ್ವ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 18ರಂದು ರಾಮನಗರ ಕೋರ್ಟ್ಗೆ ಹಾಜರಾಗುವಂತೆಯೂ ಆದೇಶಿಸಿದ್ದಾರೆ.
ಬಿಡದಿ ಧ್ಯಾನಪೀಠದ ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ವಿರುದ್ಧ ರಾಮನಗರ ಕೋರ್ಟ್ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಹಾಗೂ ಪುರುಷತ್ವ ಪರೀಕ್ಷೆ ನಡೆಸುವಂತೆ ರಾಮನಗರದ ಸಿಜೆಎಂ ಕೋರ್ಟ್ ಆದೇಶಿಸಿತ್ತು. ಆದರೆ ರಾಮನಗರ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿತ್ಯಾನಂದ ಮತ್ತು ಇತರೆ ನಾಲ್ವರು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಿನ್ನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಸ್. ಪಚ್ಚಾಪುರೆ ಅವರ ಏಕ ಸದಸ್ಯ ಪೀಠ ನಿತ್ಯಾ ಹಾಗೂ ಇತರ ನಾಲ್ವರು ವಿರುದ್ಧದ ವಾರಂಟ್ಗೆ ಒಂದು ದಿನದ ತಡೆಯಾಜ್ಞೆ ವಿಧಿಸಿತ್ತು.
ಪುರುಷತ್ವ ಪರೀಕ್ಷೆ ಸಂಬಂಧದ ವಿಚಾರಣೆಗೆ ಗೈರು ಹಾಜರಾದ ನಿತ್ಯಾನಂದ ವಿರುದ್ಧ ರಾಮನಗರ ಸಿಜೆಎಂ ಕೋರ್ಟ್ ಕಳೆದ ಸೋಮವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.