ಕರ್ನಾಟಕದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಎನ್ಡಿಟಿವಿ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ. 2009ರಲ್ಲಿ ಅದು ಗೆದ್ದ ಸ್ಥಾನಗಳಿಗಿಂತ ಅದು ಕಡಿಮೆಯಾಗಲಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಇದನ್ನು ಬಿಜೆಪಿಯ ಚೇತರಿಕೆಯ ಲಕ್ಷಣವೆಂದು ಭಾವಿಸಬಹುದು.
ಕಾಂಗ್ರೆಸ್ ಕೇವಲ 10 ಸ್ಥಾನಗಳಿಗೆ ತೃಪ್ತಿಪಡಲಿದ್ದು, ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು ಗಳಿಸಲಿದೆ. ಆದರೆ ಬಿಜೆಪಿಯಿಂದ ಅಧಿಕಾರದ ಚುಕ್ಕಾಣಿ ಕಸಿದುಕೊಂಡ ಪಕ್ಷಕ್ಕೆ ಇದು ನಿರಾಶಾದಾಯಕ ಅಂಕಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕಾಂಗ್ರೆಸ್ 18ರಿಂದ 20 ಸೀಟುಗಳಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಿಜೆಪಿ ನರೇಂದ್ರ ಮೋದಿ ಅಲೆಯ ಲಾಭ ಪಡೆದಿದೆಯಲ್ಲದೇ ವಿವಾದಾತ್ಮಕ ಮುಖಂಡರಾದ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರನ್ನು ಮತ್ತೆ ತನ್ನ ಮಡಿಲಿಗೆ ಸೇರಿಸಿದೆ. ಜಾತ್ಯತೀತ ಜನತಾ ದಳ ತನ್ನ ಸ್ಥಾನಮಾನ ಹೆಚ್ಚಿಸಿಕೊಳ್ಳಲು ವಿಫಲವಾಗಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಇದು ಕೇವಲ 2 ಸೀಟುಗಳನ್ನು ಗೆಲ್ಲುತ್ತದೆಂದು ನಿರೀಕ್ಷಿಸಲಾಗಿದೆ.