ಜಿಲ್ಲೆಯ ಹೊನ್ನಾವರ ತಾಲೂಕಿನ ಬಂಗಾರು ಮಕ್ಕಿಯಲ್ಲಿರುವ ವೀರಾಂಜನೇಯ ದೇವಾಲಯದ ಧರ್ಮಾಧಿಕಾರಿ ಮಾರುತಿ ಗುರೂಜಿ ಅವರಿಂದ ನನಗೆ ನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಆರೋಪಿಸಿ ಗುರೂಜಿ ಅವರ ಸ್ವಂತ ಅತ್ತಿಗೆ ನಯನಾ ಭಟ್ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿರುವ ಅವರು, ಗುರೂಜಿ ನನ್ನ ಗಂಡನ ತಮ್ಮನಾಗಿದ್ದು, ಆತ ನನಗೆ ದಿನನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಲ್ಲದೆ ಗುರೂಜಿ ಅವರ ಎಲ್ಲಾ ಕುತಂತ್ರಗಳನ್ನು ನನ್ನ ಗಂಡ ರಾಮಚಂದ್ರ ಭಟ್ ಅವರಿಗೆ ಹೇಳಿದರೂ ಕೂಡ ನೀನು ಸುಳ್ಳು ಹೇಳುತ್ತಿದ್ದೀಯ. ನನ್ನ ತಮ್ಮ ಅಂತಹವನಲ್ಲ ಎಂದು ನನ್ನನ್ನೇ ಹೊಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಜ.3ರಂದು ನಾನು ನನ್ನ ಗಂಡನ ಮನೆಯಿಂದ ಹೊರ ಬಂದು ಆಶ್ರಮದಲ್ಲಿ ಆಶ್ರಯ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಗುರೂಜಿ ನನ್ನನ್ನೇ ಅಲ್ಲದೆ ಇತರೆ ಯುವತಿಯರನ್ನೂ ಕೂಡ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಅಲ್ಲದೆ ಅವರನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾರೆ. ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳ ವಿರುದ್ಧ ಕೆಲವರೊಂದಿಗೆ ಸೇರಿ ಮಾತನಾಡಿಕೊಳ್ಳುವ ಮೂಲಕ ಖುಷಿಪಡುತ್ತಿದ್ದರು. ಅಷ್ಟೇ ಅಲ್ಲದೆ ನನ್ನ ಅತ್ತೆ ನನಗಾಗಿ ಕೊಂಡು ನನ್ನ ಹೆಸರಿಗೆ ಮಾಡಿಸಿಕೊಟ್ಟಿದ್ದ 1.13 ಗುಂಟೆ ಜಮೀನನನ್ನು ಪ್ರಾಣ ಬೆದರಿಕೆ ಹಾಕಿ ಬಳಿಕ ಅವರ ಹೆಸರಿಗೆ ಖಾತೆ ಮಾಡಿಸಿಕೊಂಡರು ಎಂದು ಆರೋಪಿಸಿದ್ದಾರೆ.