Select Your Language

Notifications

webdunia
webdunia
webdunia
webdunia

ಹಾಲಿ-ಮಾಜಿ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನವಿಲ್ಲ: ದಿಗ್ವಿಜಯ್ ಸಿಂಗ್

ಹಾಲಿ-ಮಾಜಿ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನವಿಲ್ಲ: ದಿಗ್ವಿಜಯ್ ಸಿಂಗ್
ಬೆಂಗಳೂರು , ಶುಕ್ರವಾರ, 17 ಅಕ್ಟೋಬರ್ 2014 (13:48 IST)
ಕಾರ್ಯಕರ್ತರ ಅಸಮಾಧಾನ ಬುಗಿಲೇಳುವ ಮುನ್ನ ನಿಗಮ ಮಂಡಳಿ ನೇಮಕವನ್ನು ಪೂರ್ಣಗೊಳಿಸಿ. ಈ ಮಾಸಾಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿ. ನೇಮಕದ ವೇಳೆ ಯಾವುದೇ ಕಾರಣಕ್ಕೂ ಹಾಲಿ ಹಾಗೂ ಮಾಜಿ ಶಾಸಕರಿಗೆ ಮಾನ್ಯತೆ ನೀಡುವುದು ಬೇಡ. ಬದಲಾಗಿ ಕಾರ್ಯಕರ್ತರು, ಟಿಕೆಟ್‌ ವಂಚಿತರು ಹಾಗೂ ಮಹಿಳೆಯರಿಗೆ ಪ್ರಾಧ್ಯಾನ್ಯತೆ ನೀಡಿ. 
 
ಹೀಗಂತ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರಿಗೆ ನೇರ ತಾಕೀತು ಮಾಡಿದ್ದಾರೆ. 
 
ಖಾಸಗಿ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಸಿಂಗ್‌ ಅವರು ಉಭಯ ನಾಯಕರು ಗುರುವಾರ ಭೇಟಿ ಮಾಡಿದ ಸಂದರ್ಭದಲ್ಲಿ ಈ ತಾಕೀತು ನೀಡಲಾಗಿದೆ. ಇದರಿಂದಾಗಿ ನಿಗಮ-ಮಂಡಳಿಗೆ ತೀವ್ರ ಲಾಬಿ ನಡೆಸುತ್ತಿರುವ ಹಾಲಿ ಮತ್ತು ಮಾಜಿ ಶಾಸಕರಲ್ಲಿ ತಳಮಳ ಆರಂಭವಾಗಿದೆ. 
 
ತ್ವರಿತವಾಗಿ ನೇಮಿಸಿ: 
 
ನಿಗಮ ಮಂಡಳಿ ನೇಮಕಾತಿ ತ್ವರಿತವಾಗಿ ನೆರವೇರಬೇಕು ಎಂಬುದು ಹೈಕಮಾಂಡ್‌ ಬಯಕೆ. ಈ ವಿಚಾರದಲ್ಲಿ ವಿಳಂಬ ಬೇಡ. ಗೊಂದಲ ಪರಿಹರಿಸಿ ಶೀಘ್ರ ನೇಮಕಾತಿ ಪಟ್ಟಿ ಸಿದ್ದಪಡಿಸಿ. ಈ ಪಟ್ಟಿ ತಲುಪಿದ ದಿನವೇ ಒಂದು ಕ್ಷಣವೂ ವಿಳಂಬ ಮಾಡದೇ ಹೈಕಮಾಂಡ್‌ ಒಪ್ಪಿಗೆ ನೀಡಲಿದೆ. ನೇಮಕಾತಿಗೆ ಹಾಲಿ ಹಾಗೂ ಮಾಜಿ ಶಾಸಕರಿಂದ ಒತ್ತಡವಿರಬಹುದು. ಆದರೆ, ಎಐಸಿಸಿ ಮಾರ್ಗಸೂಚಿ ಪ್ರಕಾರ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಧ್ಯನತೆ ನೀಡಬೇಕು. ಶಾಸಕರಿಗೆ ಹಾಗೂ ಮಾಜಿ ಶಾಸಕರಿಗೆ ಅವಕಾಶ ದೊರಕಿದೆ. ಹೀಗಾಗಿ ನಿಗಮ-ಮಂಡಳಿ ನೇಮಕಾತಿಯಲ್ಲೂ ಅವರಿಗೆ ಅಧಿಕಾರ ನೀಡುವುದನ್ನು ಸಾಧ್ಯವಾದಷ್ಟು ತಡೆಗಟ್ಟಿ ಎಂದು ದಿಗ್ವಿಜಯ ನೇರ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ. 
 
ಮಾಸಾಂತ್ಯದ ವೇಳೆ ನೇಮಕ: 
 
ಇದಾದ ನಂತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿಗ್ವಿಜಯಸಿಂಗ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಿಗಮ-ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಅವರಿಗೆ ಸೂಚನೆ ನೀಡಿದ್ದು, ಅದರಂತೆ ನಡೆದುಕೊಳ್ಳುವುದಾಗಿ ಇಬ್ಬರೂ ನನಗೆ ಭರವಸೆ ಕೊಟ್ಟಿದ್ದಾರೆ ಎಂದರು. 
 
ಎಐಸಿಸಿ ನಿಗದಿಪಡಿಸಿರುವ ಮಾರ್ಗಸೂಚಿಯಂತೆ ಹಾಲಿ ಮತ್ತು ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ನಿಗಮ-ಮಂಡಳಿಗಳ ಹುದ್ದೆ ನೀಡುವುದಿಲ್ಲ. ಬದಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದವರು ಹಾಗೂ ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಉಳಿದಂತೆ ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. 
 

Share this Story:

Follow Webdunia kannada