ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆದರಿಕೆ ಪತ್ರ ಬರೆದ ಆರೋಪದ ಮೇಲೆ ದಾವಣಗೆರೆ ಮೂಲದ 35 ವರ್ಷ ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ದಾವಣಗೆರೆ ನಿವಾಸಿಯಾದ ಶಂಕರಪ್ಪನಿಗೆ ಅನಾಮಧೇಯ ಹೆಸರಿನಲ್ಲಿ, ಬೇರೆಯವರ ವಿಳಾಸವನ್ನು ಸೃಷ್ಟಿಸಿಕೊಂಡು ರಾಜಕಾರಣಿಗಳಿಗೆ ಪತ್ರ ಬರೆಯುವ ಚಟವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಗೆ ಅನಾಮಧೇಯ ಪತ್ರ ಬಂದಿದ್ದು, ಸಿಎಂ ಕಚೇರಿಯ ಅಧಿಕಾರಿಗಳು ಪತ್ರವನ್ನು ಪೊಲೀಸ್ ಇಲಾಖೆಗೆ ರವಾನಿಸಿದ್ದರು. ಪೊಲೀಸರು ಪತ್ರದ ಬಗ್ಗೆ ತನಿಖೆ ನಡೆಸಿದಾಗ ಅದು ದಾವಣಗೆರೆಯಿಂದ ಪೋಸ್ಟ್ ಆಗಿರುವುದು ತಿಳಿದು ಬಂದಿತ್ತು.
ದಾವಣಗೆರೆ ಪೊಲೀಸರು ವಿಶೇಷ ತಂಡ ರಚಿಸಿ ಪ್ರಕರಣದ ಬೆನ್ನಟ್ಟಿದಾಗ ಶಂಕರಪ್ಪ ಎನ್ನುವ ವ್ಯಕ್ತಿಯೇ ಮುಖ್ಯಮಂತ್ರಿಗಳಿಗೆ ಬೆದರಿಕೆ ಪತ್ರ ಬರೆದಿರುವುದು ಪತ್ತೆಯಾಗಿದೆ. ಶಂಕರಪ್ಪ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಸಚಿವರುಗಳಿಗೂ ಬೆದರಿಕೆ ಪತ್ರ ಬರೆದ ಹಲವು ದಾಖಲೆಗಳು ಲಭ್ಯವಾಗಿವೆ.
ಆರೋಪಿ ಶಂಕರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತಷ್ಟು ವಿಚಾರಣೆಗೊಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.