ಇಲ್ಲಿನ ಮಹಾನಗರ ಪಾಲಿಕೆಯ ಮುಂಭಾಗ ಉದ್ಯಾನದಲ್ಲಿ ನಿರ್ಮಾಣವಾಗಬೇಕಿದ್ದ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯು ಪೊಲೀಸ್ ಇಲಾಖೆಯ ಕೊಠಡಿಯೊಂದರಲ್ಲಿ ಧೂಳಿಡಿದು ಮೂಲೆ ಸೇರಿದೆ.
ಈ ಪ್ರತಿಮೆಯನ್ನು ಕಳೆದ ಒಂಬತ್ತು ತಿಂಗಳ ಹಿಂದೆಯೇ ತರಿಸಲಾಗಿದ್ದರೂ ಕೂಡ ಇಲ್ಲಿಯವರೆಗೂ ಅದನ್ನು ಅನುಷ್ಠಾನ ಮಾಡದಿರುವುದು ದುರಾದೃಷ್ಟಕರ ಸಂಗತಿ.
ಇನ್ನು ಮೂಲಗಳ ಪ್ರಕಾರ, ಈ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದು ಹೇಗೆ ಎಂದು ತಿಳಿಯಲು ಇಲ್ಲಿನ ಪಾಲಿಕೆ ಸದಸ್ಯರು ಮೂರು ಬಾರಿ ಮುಂಬೈಗೆ ಭೇಟಿ ನೀಡಿ ಪರಿಶೀಲಿಸಿದ್ದರು ಎನ್ನಲಾಗಿದ್ದು, ಅದಕ್ಕಾಗಿ ಸುಮಾರು 5 ಲಕ್ಷ ಖರ್ಚಾ ಮಾಡಿಡಿದ್ದರೆ, ಪ್ರತಿಮೆಯನ್ನು ತರಲು ಸಾರಿಗೆ ಖರ್ಚಿಗಾಗಿ 7 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗೆ ಪ್ರತಿಮೆಯ ಅನಾವರಣ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯರು ಸುಮಾರು 30 ಲಕ್ಷ ರೂ. ವ್ಯಯಿಸಿದ್ದಾರೆ. ಆದರೆ ಪ್ರತಿಮೆಯನ್ನು ಮಾತ್ರ ಇಲ್ಲಿಯವರೆಗೂ ಅನಾವರಣ ಮಾಡಿಲ್ಲ.
ಪಾಲಿಕೆಯ ಈ ಕುರುಡು ನೀತಿಯನ್ನು ಕಂಡು ಮಾಧ್ಯಮಗಳು ಪ್ರಶ್ನಿಸಲು ಯತ್ನಿಸುತ್ತಿವೆಯಾದರೂ ಪಾಲಿಕೆಯ ಯಾವೊಬ್ಬ ಸದಸ್ಯರೂ ಕೂಡ ಸೂಕ್ತ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಇದ್ದು, ಅಂದಾದರೂ ಪ್ರತಿಮೆ ಅನಾವರಣಗೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.