ಕಾವೇರಿ ನದಿ ಹರಿಯುವ ಸ್ಥಳ ನಗರದ ಮೇಕೆದಾಟುವಿಗೆ ಪ್ರವಾಸ ತೆರಳಿದ್ದ ವೇಳೆಯಲ್ಲಿ ಆಟವಾಡುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಇಬ್ಬರು ಬಾಲಕಿಯರು ನೀರುಪಾಲಿಗಿರುವ ಘಟನೆ ನಿನ್ನೆ ಇಲ್ಲಿನ ಬೊಮ್ಮಸಂದ್ರದ ಬಳಿ ನಡೆದಿದೆ.
ನೀರಿನಲ್ಲಿ ಕೊಚ್ಚಿಹೋದ ಬಾಲಕಿಯರನ್ನು ನಗರದ ರಾಜಾಜಿನಗರ ನಿವಾಸಿಗಳಾದ ಲೀಸಾ(14) ಹಾಗೂ ಮೋನಾ(12) ಎಂಬ ಸಹೋದರಿಯರು ಎಂದು ತಿಳಿದು ಬಂದಿದೆ.
ಕಂದಾಯ ಇಲಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಜಿನಿಕಾಂತ್ ಎಂಬುವವರು ನಿನ್ನೆ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಆಟವಾಡುತ್ತಿದ್ದಾಗ ಆಯ ತಪ್ಪಿ ಕಾಲುಜಾರಿದ ಪರಿಣಾಮ ನೀರಿಗೆ ಬಿದ್ದಿದ್ದಾರೆ ಎಂದು ಬಾಲಕಿಯರ ಪೋಷಕರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಸಂಬಂಧ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.