ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಿನ್ನೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 171 ಜೋಡಿಗಳ ಪೈಕಿ 9 ಜೋಡಿಗಳನ್ನು ವಾಪಸ್ ಕಳಿಸಿದ್ದರೂ ವಿವಾಹ ನೋಂದಣಾಧಿಕಾರಿ ಅಂಜಲಿ ಅಪ್ರಾಪ್ತ ವಯಸ್ಕರಿಗೆ ವಿವಾಹ ನೋಂದಣಿ ಮಾಡಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಗಂಡಿಗೆ 21 ವರ್ಷ ಹೆಣ್ಣಿಗೆ 18 ವರ್ಷ ತುಂಬಿರಬೇಕು ಎಂಬ ಕಾನೂನಿದೆ.
ಆದರೆ ವಿವಾಹವಾಗದೇ ವಾಪಸ್ ಬಂದ ಅಪ್ರಾಪ್ತ ವಯಸ್ಕ ಜೋಡಿಗಳಿಗೆ ಬಾಗೇಪಲ್ಲಿ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಣಾಧಿಕಾರಿ ಅಂಜಲಿ ವಿವಾಹ ನೋಂದಣಿ ಮಾಡಿಸಿದ್ದಲ್ಲದೇ ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ದಂಪತಿ ಖುಷಿಯಾಗಿರುತ್ತಾರೆ. ಈಗಿನ ಹುಡುಗರಿಗಿಂತ ಹೆಣ್ಣುಮಕ್ಕಳು ತುಂಬಾ ಫಾಸ್ಟ್ ಆಗಿರುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.
ವಿವಾಹ ಕಾರ್ಯಕ್ರಮ ಸ್ಥಳದಲ್ಲಿದ್ದ ತಹಸೀಲ್ದಾರ್ ಮತ್ತಿತರರು ಅಪ್ರಾಪ್ತರ ಮದುವೆಗೆ ಅವಕಾಶ ನೀಡದೇ ವಾಪಸು ಕಳಿಸಿದ್ದರೂ, ವಿವಾಹ ನೋಂದಣಿ ಮಾಡಿಸಿದ್ದು ಕಾನೂನಿಗೆ ವಿರುದ್ಧವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.