ನಗರದ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಶನಿವಾರ ಮಧ್ಯರಾತ್ರಿ , ಮಹಮ್ಮದ್ ಅಬ್ದುಲ್ ಖಾದರ್ ಎಂಬ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೋಲಿಸರು, ಆತನ ಬಳಿಯಿಂದ ಸ್ಫೋಟಕಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಮಾನ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತೆ ಎಂಬ ಸಂಶಯ ಮೂಡಿದ್ದು, ಬಂಧಿತ ಖಾದರ್ ಭಯೋತ್ಪಾದಕ ಗುಂಪಿನ ಸದಸ್ಯನೇ ಎಂದು ತನಿಖೆ ನಡೆಸಲಾಗುತ್ತಿದೆ.
ಶಂಕಿತ ಆರೋಪಿ ನೆರೆ ರಾಜ್ಯ ಕೇರಳ ಮೂಲದವನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆತ ಕಳೆದ 9 ವರ್ಷಗಳಿಂದ ದುಬಾಯಿಯಲ್ಲಿ ಗ್ರಾಫಿಕ್ ಡಿಸೈನಿಂಗ್ ಕಂಪನಿಯಲ್ಲಿ ಮೆನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದುಬಾಯಿಗೆ ಮರಳುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.
ಸಪ್ಟಂಬರ್ 13 ರ ರಾತ್ರಿ 11.30ರ ಸುಮಾರಿಗೆ ಮಂಗಳೂರಿನಿಂದ ದುಬಾಯಿಗೆ ತೆರಳಲಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸಲು ಈ ವ್ಯಕ್ತಿ ಆಗಮಿಸಿದ್ದು, ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಲಗೇಜನ್ನು ತಪಾಸಣೆ ಮಾಡಿದಾಗ ಸ್ಪೋಟಕ ಸಾಮಗ್ರಿಗಳು ಪತ್ತೆಯಾಗಿವೆ.
ಸ್ಫೋಟ ಸಾಧ್ಯತೆ ಇರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಯನ್ನು ಕೈಗೊಂಡಿದ್ದರು.
ಸ್ಫೋಟಕ ವಸ್ತುಗಳು ಪತ್ತೆಯಾದ ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ವಿಮಾನ ನಿಲ್ದಾಣಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು.
ಆರೋಪಿಯನ್ನು ರಹಸ್ಯ ಸ್ಥಳದಲ್ಲಿಟ್ಟು ತನಿಖೆ ನಡೆಸಲಾಗುತ್ತಿದ್ದು, ಸಿರಿಯಾ ಮೂಲದ ವ್ಯಕ್ತಿ/ಯಿಂದ ಈ ಸಾಮಗ್ರಿ ರವಾನೆಯಾಗಿವೆ ಎಂದು ಆತ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ, ಡಿಸಿಪಿ ಡಾ| ಕೆ. ವಿ. ಜಗದೀಶ್, ಪಣಂಬೂರು ಎಸಿಪಿ ರವಿಕುಮಾರ್ ತನಿಖೆ ನಡೆಸುತ್ತಿದ್ದಾರೆ .