ಮಹಿಳಾ ಶೌಚಾಲಯದೊಳಗೆ ನುಗ್ಗಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಟ್ಟಗೋಡನಹಳ್ಳಿಯ ನಾಗರಾಜು, ಸಾರ್ವಜನಿಕರಿಂದ ಗೂಸಾ ತಿಂದ ಕಾಮುಕ.
ಈತ ಪ್ಲಾಟ್ಫಾರಂ 7 ರಲ್ಲಿ ಸುಮ್ಮನೆ ಕುಳಿತಿದ್ದು, ಬಸ್ ಇಳಿದು ಶೌಚಾಲಯದೊಳಗೆ ಹೋದ ಮಹಿಳೆಯನ್ನು ಹಿಂಬಾಲಿಸಿ, ಶೌಚಾಲಯದೊಳಗೆ ಆತನೂ ನುಗ್ಗಿದ್ದ. ನಂತರ ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆ ಜಮಾವಣೆಗೊಂಡ ಬಸ್ ಪ್ರಯಾಣಿಕರು, ಸಾರ್ವಜನಿಕರು ಆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದರು.
ಆದರೆ ಆತ ಮಾತ್ರ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿಲ್ಲ ಅಂತ ಸಮರ್ಥಿಸಿಕೊಳ್ಳುತ್ತಿದ್ದ. ಗೊತ್ತಾಗದೇ ಮಹಿಳಾ ಶೌಚಾಲಯದೊಳಗೆ ಹೋಗಿದ್ದಾಗಿ ಅಹಂಕಾರದಿಂದ ಸಾರ್ವಜನಿಕರಿಗೆ ಉತ್ತರ ನೀಡಿದ. ಬಡಾವಣೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ ಸಾರ್ವಜನಿಕರು ಪೊಲೀಸರಿಗೆ ಆತನನ್ನು ಒಪ್ಪಿಸಿದರು.
ಮಫ್ತಿಯಲ್ಲಿ ಬೈಕ್ನಲ್ಲಿ ಬಂದ ಪೊಲೀಸರ ಜೊತೆ ಠಾಣೆಗೆ ಹೋಗಲು ಆತ ನಿರಾಕರಿಸಿದ. ನಂತರ ಬಲವಂತವಾಗಿ ಆತನನ್ನು ಆಟೋದಲ್ಲಿ ಕೂರಿಸಿ ಠಾಣೆಗೆ ಕರೆದೊಯ್ಯಲಾಯಿತು. ಬಡಾವಣೆ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.