ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ ಪದೇ ಪದೇ ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದ್ದು ಲಾಟರಿ ಮಾಫಿಯಾ ಅವರನ್ನು ಬಲಿ ತೆಗೆದುಕೊಂಡಿತೆ ಎಂಬ ಅನುಮಾನ ಈಗ ಹೆಡೆ ಎತ್ತುತ್ತಿದೆ.
ಲಾಟರಿ ಮಾಫಿಯಾ ಹಲವು ಸತ್ಯಗಳನ್ನು ಅನಾವರಣಗೊಳಿಸುತ್ತಿದೆ. ಹಲವು ಉನ್ನತ ಅಧಿಕಾರಿಗಳ ಬಣ್ಣವನ್ನು ಬಯಲು ಮಾಡುತ್ತಿದೆ. ಲಾಟರಿ ದಂಧೆಯ ಮಾಹಿತಿ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಿ.ಕೆ. ರವಿ ಅವರಿಗೂ ಗೊತ್ತಿತ್ತು ಎನ್ನುವ ಸ್ಪೋಟಕ ಸತ್ಯವೀಗ ಬಹಿರಂಗವಾಗಿದೆ.
ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಡಿ.ಕೆ. ರವಿ ಸಾವಿಗೀಡಾವುದಕ್ಕೆ 2 ದಿನ ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ. ಲಾಟರಿ ಮಾಫಿಯಾದ ಬಗ್ಗೆ ದೂರು ಸಹ ದಾಖಲಾಗಿತ್ತು ಎನ್ನಲಾಗಿದೆ. ಕರ್ನಾಟಕ ರಾಜ್ಯ ಲಾಟರಿ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಸಿ ರಾಮಕೃಷ್ಣ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
2015 ಮಾರ್ಚ್ 13ರಂದು ಲಾಟರಿ ಮಾಫಿಯಾದ ಎಲ್ಲಾ ಮಾಹಿತಿಯೂ ರವಿ ಅವರಿಗೆ ತಲುಪಿತ್ತು. ಈ ಕುರಿತು ಸಿ.ರಾಮಕೃಷ್ಣ ತಾವು ಮಾರ್ಚ್ 13ರಂದು ರವಿಗೆ ದೂರು ನೀಡಿದ್ದಾಗಿ ಅವರು ತಿಳಿಸಿದ್ದಾರೆ. ದೂರು ಬಂದ ಹಿನ್ನಲೆಯಲ್ಲಿ ರವಿ ಈ ಕುರಿತು ತನಿಖೆ ನಡೆಸುವ ಆಶ್ವಾಸನೆ ನೀಡಿದ್ದರು.
ಆದರೆ ದೂರು ತಲುಪಿದ ಮೂರೇ ದಿನಗಳಲ್ಲಿ ಡಿಕೆ ರವಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಹೀಗಾಗಿ, ಲಾಟರಿ ಮಾಫಿಯಾಗೂ ರವಿ ನಿಗೂಢ ಸಾವಿಗೂ ಸಂಬಂಧ ಇದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.