ರಾಜ್ಯ ಸರ್ಕಾರವು ಕಳೆದ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದ ಲೋಕಾಯುಕ್ತ ತಿದ್ದುಪಡಿ ವಿಧೇಯಕ-2015ನ್ನು ಕೊನೆಗೂ ಮಂಡಿಸುವಲ್ಲಿ ಯಶಸ್ವಿಯಾಗಿದ್ದು, ಇಂದು ವಿಧಾನ ಪರಿಷತ್ನಲ್ಲಿ ಇಂದು ಅಂಗೀಕರಿಸಲಾಗಿದೆ.
ರಾಜ್ಯದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮಸೂದೆಯನ್ನು ಮಂಡಿಸಿದರು. ಮಂಡನೆ ವೇಳೆ ಸದನದಲ್ಲಿ ಮಾತನಾಡಿದ ಸಚಿವ ಜಯಚಂದ್ರ, ಸಮಗ್ರ ತಿದ್ದುಪಡಿ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಅಧಿವೇಶನ ಕರೆಯಲಾಗುವುದು ಎಂದರು.
ಇನ್ನು ಭ್ರಷ್ಟಾಚಾರವನ್ನು ತೊಡೆದು ಹಾಕುವ ಲೋಕಾಯುಕ್ತ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದ್ದು, ಮುಖ್ಯ ಲೋಕಾಯುಕ್ತರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಹೋರಾಟಗಳು ರಾಜ್ಯಾದ್ಯಂತ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯಿದೆಯನ್ನು ಮೊದಲಿಗೆ 1986ರಲ್ಲಿ ಜಾರಿಗೊಳಿಸಲಾಗಿತ್ತು.