ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತೀರ್ಪು ನೀಡಿದ್ದ ಶಿವಮೊಗ್ಗದ ಸಾಗರ ಪಟ್ಟಣದ ಜಿಲ್ಲಾ ಕೋರ್ಟ್ ನ್ಯಾಯಮೂರ್ತಿ ಮಹೇಶ್ವರಿ ಹಿರೇಮಠ್ ಅವರಿಗೆ ಜೀವಬೆದರಿಕೆ ಕರೆ ಬಂದಿದೆ. ಇಬ್ಬರು ಕೊಲೆಗಡುಕರಿಗೆ ಮಹೇಶ್ವರಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಹಿನ್ನೆಲೆಯಲ್ಲಿ ಬೆದರಿಕೆ ಕರೆ ಬಂದಿರಬಹುದೆಂದು ಶಂಕಿಸಲಾಗಿದೆ.
ಬೆಂಗಳೂರಿನಿಂದ ಕರೆ ಮಾಡಿದ ಅಪರಿಚಿತರು ಅವರಿಗೆ ಜೀವಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಗರ ನಗರ ಠಾಣೆಗೆ ಮಹೇಶ್ವರಿ ಅವರು ದೂರು ನೀಡಿದ್ದಾರೆ. ನ್ಯಾಯಾಧೀಶೆ ಮೊಬೈಲ್ಗೆ ಈ ದೂರವಾಣಿ ಕರೆ ಬಂದಿದ್ದು, ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಕರೆ ಮಾಡಿದಾತ ಹೇಳಿದ್ದ. ಅಪರಿಚಿತ ವ್ಯಕ್ತಿಗೆ ತಮ್ಮ ಮೊಬೈಲ್ ಸಂಖ್ಯೆ ಗೊತ್ತಾಗಿದ್ದು ಹೇಗೆಂಬ ಬಗ್ಗೆ ಹಿರೇಮಠ್ಗೆ ಖಚಿತವಾಗಿಲ್ಲ .
ಬೆಂಗಳೂರಿನ ಕತ್ತರಗುಪ್ಪೆಯಿಂದ ಈ ಕರೆ ಬಂದಿರುವುದನ್ನು ಟ್ರೇಸ್ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮಹೇಶ್ವರಿ ಹಿರೇಮಠ್ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ನ್ಯಾಯಾಧೀಶೆಗೆ ಜೀವಬೆದರಿಕೆ ಕರೆ ಕೊಟ್ಟವರನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದಾರೆ.