ಸೊರಬ: ಶಕುಂತಲಾ ಬಂಗಾರಪ್ಪ ಪಾರ್ಥಿವ ಶರೀರದ ದರ್ಶನಕ್ಕೆ ಕುಮಾರ್ ಬಂಗಾರಪ್ಪ ಇಂದು ಬೆಳಿಗ್ಗೆ ಬಂಗಾರಪ್ಪ ನಿವಾಸಕ್ಕೆ ಆಗಮಿಸಿದಾಗ ಮಧು ಬಂಗಾರಪ್ಪ ಬೆಂಬಲಿಗರು ತಡೆಯಲು ಮುಂದಾದಾಗ ಇಬ್ಬರು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನುಗ್ಗಾಟ ನಡೆಯಿತು. ಮಧುಬಂಗಾರಪ್ಪ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿ ಇಬ್ಬರು ಸೋದರರ ನಡುವೆ ತೀವ್ರ ವಾದ, ವಿವಾದ ನಡೆಯಿತು. ತಾಯಿಯ ಅಂತ್ಯಸಂಸ್ಕಾರದಲ್ಲಿ ಕೂಡ ರಾಜಕೀಯ ಇಣುಕಿ ಪರಿಸ್ಥಿತಿ ವಿಕೋಪಕ್ಕೆ ತಲುಪಿತು. ತಾಯಿ ಕಾಯಿಲೆ ಬಿದ್ದಾಗ ನೋಡಲು ಬರದವನು ಈಗ ಏಕೆ ಬರುತ್ತಿದ್ದಾನೆ ಎಂದು ಮಧು ಆಕ್ಷೇಪಿಸಿದಾಗ ಸಹೋದರರ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಬಂಗಾರಪ್ಪ ನಿವಾಸದಿಂದ ಶಕುಂತಲಾ ಅವರ ಪಾರ್ಥಿವ ಶರೀರ ಸೊರಬಕ್ಕೆ ತಲುಪಿದ್ದು ಅಲ್ಲಿನ ಬಂಗಾರ ಧಾಮದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.
ಈ ನಡುವೆ ಪಾರ್ಥಿವ ಶರೀರದ ಜತೆ ಒಂದೇ ವಾಹನದಲ್ಲಿ ಸೋದರರಿಬ್ಬರು ತೆರಳಿದ್ದರು. ಆದರೆ ಪಾರ್ಥಿವ ಶರೀರಕ್ಕೆ ಸಂಜೆ ಕಿರಿಯ ಸಹೋದರ ಮಧು ಬಂಗಾರಪ್ಪ ಅಗ್ನಿಸ್ಪರ್ಶ ಮಾಡಲಿದ್ದಾರೆ.