Select Your Language

Notifications

webdunia
webdunia
webdunia
webdunia

ಜಮೀನು ವಿವಾದ: ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಜಮೀನು ವಿವಾದ: ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ರಾಮನಗರ , ಭಾನುವಾರ, 21 ಫೆಬ್ರವರಿ 2016 (11:20 IST)
ಮನೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 19 ವರ್ಷದ ಯುವಕ ಮೃತಪಟ್ಟಿದ್ದು ಆತನ ತಂದೆತಾಯಿಗಳ ಸ್ಥಿತಿ ಗಂಭೀರವಾಗಿದೆ. 
 
ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ ದುಷ್ಕರ್ಮಿಗಳು ಮನೆಯ ಹೊರಗೆಲ್ಲ ಸೀಮೆಎಣ್ಣೆ ಸುರಿದು ಸಿನಿಮೀಯ ಶೈಲಿಯಲ್ಲಿ ಕುಕೃತ್ಯವನ್ನು ಎಸಗಿದ್ದಾರೆ. 
 
ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಿದ್ದೆಯಲ್ಲಿದ್ದ ದಂಪತಿ ಮತ್ತು ಪುತ್ರ ಬೆಂಕಿಯಲ್ಲಿ ಜೀವಂತವಾಗಿ ದಹಿಸಿದ್ದಾರೆ. ನೆರೆಹೊರೆಯವರು ಅವರ ಸಹಾಯಕ್ಕೆ ಬಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯುವಕ ಭರತ್ ಗೌಡ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆತ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಎಂದು ತಿಳಿದು ಬಂದಿದೆ. 
 
ಮನೆಯ ಯಜಮಾನ ಭೋಜಣ್ಣ ಅವರನ್ನು ಲಕ್ಕಸಂದ್ರದ ಅಭಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ವಿಜಯಲಕ್ಷ್ಮಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರ ಸ್ಥಿತಿ ಸಹ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 
 
ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಘೋರ ಕೃತ್ಯವನ್ನು ಎಸಗಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.
 
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

Share this Story:

Follow Webdunia kannada