ನಗರದಲ್ಲಿ ಕೆಎಸ್ಆರ್ಟಿಸಿ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಿರಿಯ ಅಧಿಕಾರಿಯ ಕಿರುಕುಳ ತಾಳಲಾರದೆ 27 ವರ್ಷದ ಚಾಲಕ ವಿನಾಯಕ್ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಬ್ಬಾಳದ ದಾಸರಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ಕೆಜಿಎಫ್ನಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ್ಗೆ ಎರಡು ವರ್ಷದ ಹಿಂದೆ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಶಾಂತಿನಗರದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹಿರಿಯ ಅಧಿಕಾರಿ ವಿಪರೀತ ಕಿರುಕುಳ ನೀಡುತ್ತಾರೆ ಎಂದು ಮನೆಯವರ ಬಳಿ ಹೇಳಿಕೊಂಡಿದ್ದರಂತೆ. ಇದೇ ಕಾರಣಕ್ಕಾಗಿ ಕಳೆದ ಹತ್ತು ದಿನದಿಂದ ಕೆಲಸಕ್ಕೆ ಸಹ ಹೋಗದೆ ಮನೆಯಲ್ಲಿಯೇ ಇದ್ದರೆಂದು ತಿಳಿದು ಬಂದಿದೆ.
ನಿನ್ನೆ ಬೆಳಿಗ್ಗೆ ಇದ್ದ ಖಿನ್ನರಾಗಿದ್ದ ವಿನಾಯಕ್ ಅಧಿಕಾರಿಯ ಕಿರುಕುಳವೇ ತಮ್ಮ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿನಾಯಕ್ ಸಾವಿನಿಂದ ಅವರ ಕುಟುಂಬ ಕಂಗಾಲಾಗಿದೆ. ವಿವಾಹಿತರಾಗಿದ್ದ ವಿನಾಯಕ್ ಅವರಿಗೆ ಒಂದು ಮಗುವಿದ್ದು ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.