2011ರ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮಧ್ಯಾಂತರ ತಡೆ ನೀಡಿದೆ.
ಕೆಎಟಿ ನ್ಯಾಯಮೂರ್ತಿ ಮೂಸೆ ಕುಂಞ ನಾಯರ್ ಮೂಲೆ ಹಾಗೂ ಸದಸ್ಯ ಅಭಿಜಿತ್ ದಾಸ್ಗುಪ್ತ ಅವರಿದ್ದ ವಿಭಾಗೀಯ ಪೀಠವು ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.
2011ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್ಸಿ) ನೇಮಕಗೊಂಡಿದ್ದ 362 ಜನರಲ್ಲಿ ದೇವರಾಜ್ ಹಾಗೂ ಇತರ 159 ಜನರು ಈ ಮೇಲ್ಮನವಿ ಸಲ್ಲಿಸಿದ್ದಾರೆ. ಬುಧವಾರ ವಿಚಾರಣೆ ನಡೆಸಿದ ನ್ಯಾಯಪೀಠ, ಸರ್ಕಾರ ಸೆಪ್ಟೆಂಬರ್ 19ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ನಂಜುಂಡರೆಡ್ಡಿ ಹಾಜರಾಗಿ, ‘2011ರಲ್ಲಿ ಆಯ್ಕೆಯಾಗಿದ್ದ ಗೆಜೆಟೆಡ್
ಪ್ರೊಬೇಷನರಿ ಅಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರವು 2014ರ ಆಗಸ್ಟ್ 14ರಂದು ಹಿಂದಕ್ಕೆ ಪಡೆದಿದೆ. ಇದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ್ದರಿಂದ ಇದು ಸಂವಿಧಾನದ 16ನೇ ವಿಧಿಯ (ಸಾರ್ವಜನಿಕ ಉದ್ಯೋಗ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದಾಗಿ ಕೆಪಿಎಸ್ಸಿ ಪರೀಕ್ಷೆ ಎದುರಿಸಿದ್ದ ಪ್ರಾಮಾಣಿಕ ಮತ್ತು ಅರ್ಹತೆ ಆಧಾರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ.
ಅಂತೆಯೇ ಸರ್ಕಾರದ ಈ ನಿರ್ಧಾರ ಗೆಜೆಟೆಡ್ ಪ್ರೊಬೇಷನರ್ಸ್ ಅಧಿನಿಯಮ–1997ರ ನಿಯಮ 11 (3)ಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.
ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು ಸರ್ಕಾರ ಹೊಸ ನೇಮಕಾತಿಗಾಗಿ ಯಾವುದೇ ಅಧಿಸೂಚನೆ ಹೊರಡಿಸಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿತು.