ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೆಮ್ಮು ಹಾಗೂ ಮದುಮೇಹ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಂದು ನಗರದ ಜಿಂದಾಲ್ ಪ್ರಕೃತಿ ಚಿತ್ಸಾಲಯಕ್ಕೆ ಭೇಟಿ ನೀಡಲಿದ್ದು, 10 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ.
ಕೇಜ್ರಿವಾಲ್, ಮಧ್ಯಾಹ್ನ 12.30ವೇಳೆಗೆ ನಗರಕ್ಕೆ ಆಗಮಿಸಲಿದ್ದು, ನೇರವಾಗಿ ನಗರದ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಆಸ್ಪತ್ರೆಗೆ ತೆಳಲಿದ್ದಾರೆ. ಅಲ್ಲದೆ ಇಂದಿನಿಂದ 10 ದಿನಗಳ ಕಾಲ ಈ ಆಸ್ಪತ್ರೆಯಲ್ಲಿ ತಂಗಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. ಆಸ್ಪತ್ರೆಯ ವೈದ್ಯೆ ಡಾ. ಬಬಿತಾ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಫ, ಮದುಮೇಹ, ಹಾಗೂ ಕೆಮ್ಮಿಗೆ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗಿದ್ದು, ಚಿಕಿತ್ಸಾ ವೇಳೆಯಲ್ಲಿ ಯೋಗ, ಪ್ರಾಣಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ಎಎಪಿ ಪಕ್ಷದ ರಾಜ್ಯದಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ಕೂಡ ಆಸ್ಪತ್ರೆಗೆ ಭೇಟಿ ನೀಡಬಾರದು ಎಂದು ಈಗಾಗಲೇ ಮನವಿ ಮಾಡಲಾಗಿದ್ದು, ಭೇಟಿಗೆ ಅವಕಾಶ ಕೂಡ ಮಾಡಿಕೊಟ್ಟಿಲ್ಲ. ಆದರೆ ಚಿಕಿತ್ಸೆ ಪಡೆದು ವಾಪಾಸಾಗುವ ಕೊನೆಯ ದಿನದಂದು ರಾಜ್ಯ ಕಾರ್ಯಕರ್ತರೊಂದಿಗೆ ಕೇಜ್ರಿವಾಲ್ ಸಂವಾದ ನಡೆಸಲಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯನ್ನೂ ಕರೆಯಲಿದ್ದು, ಹಲವು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ವಿಶ್ವಾಸನೀಯ ಮೂಲಗಳು ತಿಳಿಸಿವೆ.