ನೀರಾವರಿ ಕಾಲುವೆಯಲ್ಲಿಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಹೃದಯವಿದ್ರಾವಕ ಘಟನೆ ತಾಲೂಕಿನ ಹುಲಿವಾನ ಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಬೆಂಗಳೂರಿನ ಶೃತಿ, ಜೀವನ್ ಮತ್ತು ತುಮಕೂರಿನ ಗಿರೀಶ್ ಎಂದು ಗುರುತಿಸಲಾಗಿದೆ. ಶೃತಿ ಮತ್ತು ಜೀವನ್ ಶವ ಪತ್ತೆಯಾಗಿದ್ದು . ಗಿರೀಶ್ ಶವಕ್ಕೆ ಶೋಧಕಾರ್ಯ ಮುಂದುವರೆದಿದೆ. ಗೌತಮ್ ಮತ್ತು ಸಿಂಧು ಎಂಬುವವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜೀವನ್ನನ್ನು ಸಹ ಮೇಲೆತ್ತಲಾಯಿತಾದರೂ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತರಾಗಿದ್ದಾರೆ
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದ ಸ್ನೇಹಿತರು ಕೆರೆಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಟರ್ನಶಿಪ್ ಮಾಡುತ್ತಿದ್ದರು. ಒಟ್ಟು 5 ಜನ ಸ್ನೇಹಿತರು ನಿನ್ನೆ ಸಂಜೆ ಪಿಕ್ನಿಕ್ಗೆಂದು ಹೋಗಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ ಎಲ್ಲರೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.
ಇವರೆಲ್ಲರೂ 24 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಹ ಈ ವಿದ್ಯಾರ್ಥಿಗಳು ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಸ್ಥಳೀಯರು ಅಪಾಯದ ಎಚ್ಚರಿಕೆ ಕೊಟ್ಟ ಬಳಿಕ ಹಿಂತಿರುಗಿದ್ದರು ಎಂದು ತಿಳಿದು ಬಂದಿದೆ.
ಕೆರಗೋಡು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಶೃತಿ ಮತ್ತು ಜೀವನ್ ಶವವನ್ನು ಮಿಮ್ಸ್ನ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ನೇಹಿತರನ್ನು ಕಳೆದುಕೊಂಡ ಸಹಪಾಠಿಗಳ ಶೋಕ ಮುಗಿಲು ಮುಟ್ಟಿದೆ.