Select Your Language

Notifications

webdunia
webdunia
webdunia
webdunia

ಲೋಕಾಯುಕ್ತದ ಹಲ್ಲುಕಿತ್ತ ಸರ್ಕಾರ;ಭೃಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ

ಲೋಕಾಯುಕ್ತದ ಹಲ್ಲುಕಿತ್ತ ಸರ್ಕಾರ;ಭೃಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ
ಬೆಂಗಳೂರು , ಮಂಗಳವಾರ, 15 ಮಾರ್ಚ್ 2016 (16:47 IST)
ನೂತನ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ವ್ಯವಸ್ಥಿತವಾಗಿ ಲೋಕಾಯುಕ್ತ ಸಂಸ್ಥೆಯ ಹಲ್ಲು ಕಿತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಈ ಆರೋಪವನ್ನು ಅಲ್ಲಗಳೆದಿದ್ದು ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಲು ಈ ಸಂಸ್ಥೆಯನ್ನು ಜಾರಿಗೆ ತರುತ್ತಿಲ್ಲ. ಸ್ವತಂತ್ರ ತನಿಖೆ ನಡೆಸಲು ಭೃಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಸೂಚನೆ ಮೇರೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.  1988ರ ಭ್ರಷ್ಟಾಚಾರ ಕಾಯ್ದೆ ಅನ್ವಯದಂತೆ ಈ ದಳ ಸ್ಥಾಪನೆಯಾಗಿದೆ.  ಭ್ರಷ್ಟಾಚಾರ ದಳದ ಮೇಲುಸ್ತುವಾರಿಗಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಾಗೃತ ಸಲಹಾ ಮಂಡಳಿಯನ್ನು ರಚಿಸಲಾಗಿದೆ. 
 
ಎಸಿಬಿ ಸ್ಥಾಪನೆಯಿಂದಾಗಿ ಲೋಕಾಯುಕ್ತ ಶಕ್ತಿ ಕುಂದಲಿದ್ದು, ಲೋಕಾಯುಕ್ತ ಕಾಯ್ದೆ ಜಾರಿಗೆ ತರಲಷ್ಟೇ ಲೋಕಾಯುಕ್ತ ಪೊಲೀಸರು ಸೀಮಿತವಾಗುತ್ತಾರೆ.
 
ಒಬ್ಬ ಎಡಿಜಿಪಿ ಮತ್ತು ಪೊಲೀಸ್‌ ಮಹಾನಿರೀಕ್ಷಕ (ಐಜಿಪಿ), 10 ಜನ ಪೊಲೀಸ್‌ ಅಧೀಕ್ಷಕರು, 35 ಪೊಲೀಸ್‌ ಉಪಾಧೀಕ್ಷಕರು, 75 ಪೊಲೀಸ್‌ ನಿರೀಕ್ಷಕರು, 200 ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಎಸಿಬಿ ಒಳಗೊಂಡಿರಲಿದೆ.
 
ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿ ಲೋಕಾಯುಕ್ತ ಎಂಬ ಶವಪೆಟ್ಟಿಗೆಗೆ ಎಸಿಬಿ ರೂಪದಲ್ಲಿ ಸರ್ಕಾರ ಕೊನೆಯ ಮೊಳೆಯನ್ನು ಹೊಡೆದಿದೆ ಎಂದು ಕಿಡಿಕಾರಿದೆ. 
 
ಆದರೆ ಸರ್ಕಾರದ ಈ ನಿರ್ಧಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ 
ಲೋಕಾಯುಕ್ತರ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಈ ನಿರ್ಧಾರಕ್ಕೆ ಕೈ ಹಾಕಿದೆ. ಲೋಕಾಯುಕ್ತ ಶವಪೆಟ್ಟಿಗೆಗೆ ಆ್ಯಂಟಿ ಕರೆಪ್ಸನ್ ಬ್ಯುರೋ ಮೊಳೆ ಹೊಡೆದಂತೆ ಎಂದು ಗುಡುಗಿದ್ದಾರೆ. 
 
ವಿಧಾನ ಮಂಡಲದಲ್ಲಿ ದೀರ್ಘ ಚರ್ಚೆಯ ನಂತರ ಶಾಸನಬದ್ಧವಾಗಿ ಬಂದ ಲೋಕಾಯುಕ್ತಕ್ಕೆ, ಕೇವಲ ಸರ್ಕಾರಿ ಆಜ್ಞೆಯ ಮೂಲಕ ಚರಮಗೀತೆ ಹಾಡ ಹೊರಟಿರುವ ಸರ್ಕಾರದ ನಡೆ ಖಂಡನೀಯ. ಇದು ಒಳ್ಳೆಯ ಸಂಸ್ಥೆಗಳ ಬಗ್ಗೆ, ಭೃಷ್ಟಾಚಾರದ ನಿಗ್ರಹದ ವಿರುದ್ಧ ಸರ್ಕಾರ ಹೊಂದಿರುವ ಧೋರಣೆ ಏನು ಎಂಬುದನ್ನು ತೋರಿಸುತ್ತದೆ. ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಮುಖವಾಡವನ್ನು ಬಹಿರಂಗ ಪಡಿಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. 
 
ಸರ್ಕಾರದ ಈ ನಡೆಗೆ ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Share this Story:

Follow Webdunia kannada