ಕಳಸಾ - ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಳಸಾ ಬಂಡೂರಿ ಸಮನ್ವಯ ಸಮಿತಿ ಕಾರ್ಯಕರ್ತರು ಹಾಗೂ ರೈತರು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ರೈಲು ತಡೆ ಪ್ರತಿಭಟನೆ ನಡೆಸಿದ್ದಾರೆ. ಕಳೆದ ಮೂರು ಗಂಟೆಗಳಿಂದ ಧರಣಿ ನಡೆಯುತ್ತಿದ್ದು ಸುಮಾರು 10 ರೈಲುಗಳ ಸಂಚಾರ ಸ್ಥಗಿತವಾಗಿದೆ.
ಮಹಿಳೆಯರು ಸೇರಿದಂತೆ ನೂರಾರು ರೈತರು ರೈಲು ಹಳಿ ಮೇಲೆ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಅಲ್ಲಿಯವರೆಗೆ ಹೋರಾಟ ನಡೆಸುವುದಿಲ್ಲ ಧರಣಿ ನಿರತರು ಆಗ್ರಹಿಸಿದ್ದಾರೆ.
ಅಮರಾವತಿ ಎಕ್ಸ್ಪ್ರೆಸ್, ಹುಬ್ಬಳ್ಳಿ-ಸೋಲ್ಲಾಪುರ, ಪಾಂಡಿಚೇರಿ ಪ್ಯಾಸೆಂಜರ್, ಹೈದ್ರಾಬಾದ್ - ಕೊಲ್ಲಾಪುರ್, ಸೋಲ್ಲಾಪುರ್-ಹುಬ್ಬಳ್ಳಿ, ಹುಬ್ಬಳ್ಳಿ- ಸಿಕಂದರಾಬಾದ್, ಹರಿಪ್ರಿಯಾ ಎಕ್ಸ್ಪ್ರೆಸ್ ರೈಲುಗಳ ಸೇರಿದಂತೆ 10 ಕ್ಕೂ ಹೆಚ್ಚು ರೈಲುಗಳನ್ನು ತಡೆಯಲಾಗಿದೆ.
ಪ್ರತಿಭಟನೆಯಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.