ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ದೊಡ್ಡ ನಾಯಕರಾಗಿದ್ದರಿಂದ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಪ್ರತಿಯೊಬ್ಬರಿಗೂ ಪದಾಧಿಕಾಯಾಗುವ ಇಚ್ಚೆಯಿರುತ್ತದೆ. ಆದರೆ, ಪ್ರತಿಯೊಬ್ಬರಿಗೂ ಪದಾಧಿಕಾರಿ ಸ್ಥಾನ ಕೊಡಲು ಸಾಧ್ಯವಿಲ್ಲ. ಬಿಜೆಪಿ ಕಚೇರಿಯಲ್ಲಿ ನಿನ್ನೆ ಕೆಲವರ ಸಭೆ ನಡೆಸಿರುವುದು ಗೊತ್ತಾಗಿದೆ. ನನಗೆ ಗೊತ್ತಾಗಿದ್ದಲ್ಲಿ ನಾನು ಸಭೆಗೆ ಹೋಗುತ್ತಿದ್ದೆ. ಕೆ.ಎಸ್.ಈಶ್ವರಪ್ಪ ಕೂಡಾ ಅತೃಪ್ತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಕೇಳಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಅತೃಪ್ತರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದರೂ ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ಅತೃಪ್ತರ ಸಭೆ ನಡೆಸಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಭಿನ್ನಮತೀಯರಿಗೆ ತಿರುಗೇಟು ನೀಡಿದರು.
ಒಂದೊಂದು ಹುದ್ದೆಗೂ 15-20 ಜನ ಆಕಾಂಕ್ಷಿಗಳಾಗಿರುತ್ತಾರೆ. ಪ್ರತಿಯೊಬ್ಬರು ನಾವು ಪದಾಧಿಕಾರಿಯಾಗಬೇಕು ಎನ್ನುತ್ತಾರೆ. ಪದಾಧಿಕಾರಿಗಳ ನೇಮಕ ವೇಳೆ ಸಣ್ಣಪುಟ್ಟ ಅಸಮಾಧಾನಗಳು ಸಹಜ. ಆದರೆ, ಅದನ್ನೇ ದೊಡ್ಡದಾಗಿ ಬಿಂಬಿಸಿಕೊಡುತ್ತಿರುವ ದೊಡ್ಡ ನಾಯಕರಾದ ಈಶ್ವರಪ್ಪ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ