ದೇವೇಗೌಡರು ಒಬ್ಬ ಮುಸ್ಲಿಂ ಅಭ್ಯರ್ಥಿ ವಿರುದ್ಧ ಇನ್ನೊಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿ ಮುಸ್ಲಿಂ ಓಟುಗಳ ವಿಭಜನೆಗೆ ಪ್ರಯತ್ನಿಸಿದ್ದಾರೆ. ಅವರ ಪಕ್ಷ ಜಾತ್ಯತೀತವಾಗಿದ್ದರೆ ಅವರು ಮುಸ್ಲಿಂ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಜಾಫರ್ ಷರೀಫ್ ಅವರು ಹೇಳಿಕೆಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ. ಕಳೆದ ಬಾರಿಯೂ ರೆಹಮಾನ್ ಷರೀಫ್ ಅಲ್ಪಸಂಖ್ಯಾತ ಮತಗಳು ಹಂಚಿಹೋಗಿದ್ದರಿಂದ ಹೆಬ್ಬಾಳ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು.
ಈ ಹಿನ್ನೆಲೆಯಲ್ಲಿ ದೇವೇಗೌಡರು ತಾವು ಸೆಕ್ಯೂಲರ್ ಎಂದು ಹೇಳಿಕೊಂಡು ಮುಸ್ಲಿಂ ಅಭ್ಯರ್ಥಿಯನ್ನು ಅವರ ಪಕ್ಷದಿಂದ ನಿಲ್ಲಿಸಿ ಮುಸ್ಲಿಂ ಮತವಿಭಜನೆ ಮಾಡುವುದು ಸರಿಯಲ್ಲ ಎಂದು ಜಾಫರ್ ಷರೀಫ್ ಹೇಳಿದ್ದರು. ಈ ಕುರಿತು ತಿರುಗೇಟು ನೀಡಿದ ದೇವೇಗೌಡರು, ಜಾಫರ್ ತಮ್ಮ ಮೊಮ್ಮಗನಿಗೆ ಟಿಕೆಟ್ ಕೊಡಿಸಲು ಜೆಡಿಎಸ್ ಕದ ತಟ್ಟಿದ್ರು. ಈ ಕುರಿತು ಕುಮಾರಸ್ವಾಮಿಯನ್ನು ಕೇಳಿ ಎಂದು ತಾವು ಹೇಳಿದ್ದಾಗಿ ತಿಳಿಸಿದರು. ಅದಾದ ನಂತರ ಜಾಫರ್ ಷರೀಫ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ತಾವು ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದ ಬಳಿಕ ವಾಪಸ್ ಪಡೆಯಲು ಆಗುವುದಿಲ್ಲ. ಸೆಕ್ಯೂಲರ್ ಪಾಠವನ್ನು ನಾನು ಜಾಫರ್ ಷರೀಫ್ ಅವರಿಂದ ಕಲಿಯಬೇಕಾಗಿಲ್ಲ ಎಂದು ಖಡಕ್ಕಾಗಿ ದೇವೇಗೌಡರು ಹೇಳಿದ್ದಾರೆ.