ಜೆಡಿಎಸ್ ರಾಜ್ಯ ಪರಿಶಿಷ್ಠ ಜಾತಿ ಘಟಕದ ಕಾರ್ಯದರ್ಶಿ ಬಿ. ವಿ. ನರಸಿಂಹಮೂರ್ತಿಯವರಿಗೆ ಸೇರಿದ ಫಾರ್ಚುನರ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ರಾಮನಗರದಲ್ಲಿ ವರದಿಯಾಗಿದೆ.
ತಮ್ಮ ಸ್ವಗೃಹದ ಮುಂದೆ ನಿಲ್ಲಿಸಿದ್ದ ಕಾರಿಗೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ, ಈ ಕಾರಿನ ಹಿಂಬಾಗದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ 2018 ರ ಸಾಲಿನ ಮುಖ್ಯಮಂತ್ರಿ ಎಂಬ ಸ್ಟಿಕ್ಕರ್ ಅಂಟಿಸಲಾಗಿತ್ತು.
ಕಾರು ಸುಟ್ಟು ಹೋಗಿದ್ದರಿಂದ ಆಕ್ರೋಶಗೊಂಡಿರುವ ಜೆಡಿಎಸ್ ರಾಜ್ಯ ಪರಿಶಿಷ್ಠ ಜಾತಿ ಘಟಕದ ಕಾರ್ಯದರ್ಶಿ ಬಿ. ವಿ. ನರಸಿಂಹಮೂರ್ತಿ, ರಾಜಕೀಯ ಉದ್ದೇಶದಿಂದ ನನ್ನ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಕಾರಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.