ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಜೆಡಿಎಸ್ ನಿರ್ಧರಿಸಿದೆ. ಬಿಜೆಪಿ ಈಗಾಗಲೇ ಉಪಚುನಾವಣೆಗೆ ತನ್ನ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಸಿದ್ದರಾಮಯ್ಯ ತಮ್ಮ ಪಕ್ಷಕ್ಕೆ ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಕುಮಾರಸ್ವಾಮಿ ಅವರನ್ನು ಕೋರಿದ ಹಿನ್ನಲೆಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಜೆಡಿಎಸ್ ನಿರ್ಧರಿಸಿದೆ.
ಈ ಕುರಿತು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಉಪಚುನಾವಣೆಯ ಒಪ್ಪಂದದ ಮಾತುಕತೆ ನಡೆಸಿದ ಬಳಿಕ ಕುಮಾರಸ್ವಾಮಿ ಮೂರು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ನಿರ್ಧರಿಸಿದರು. ಚಿಕ್ಕೋಡಿ, ಬಳ್ಳಾರಿ ಗ್ರಾಮಾಂತರ ಮತ್ತು ಶಿಕಾರಿಪುರ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಯಾವ ರೀತಿಯಲ್ಲಿ ಒಳಒಪ್ಪಂದ ನಡೆದಿದೆ ಎನ್ನುವುದು ರಹಸ್ಯವಾಗುಳಿದಿದೆ.
ಜೆಡಿಎಸ್ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮೃದುಧೋರಣೆ ತಾಳಿದ್ದು, ಡಿನೋಟಿಫಿಕೇಶನ್ ಪ್ರಕರಣ ಕುರಿತು ಬಿಜೆಪಿ ವಿಧಾನಸಭೆಯಲ್ಲಿ ಗದ್ದಲಎಬ್ಬಿಸಿದರೂ, ಕುಮಾರಸ್ವಾಮಿ ಆ ಬಗ್ಗೆ ಉಸಿರೆತ್ತದೇ ಕೆರೆ ಒತ್ತುವರಿ ಪ್ರಸ್ತಾಪಿಸಿ ಚರ್ಚೆ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದರು.