ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಗರಂ ಆಗಿದ್ದು, ಕೂಡಲೇ ಅವರನ್ನು ಸಂಪುಟದಿಂದ ಕೈಬಿಡುವಂತೆ ಮಂಗಳೂರಿನಲ್ಲಿ ಆಗ್ರಹಿಸಿದ್ದಾರೆ. ನಾಯಕ್ರನ್ನು ಸಂಪುಟದಿಂದ ಕಿತ್ತೊಗೆಯುವ ಆತ್ಮಸ್ಥೈರ್ಯವನ್ನು ಪ್ರದರ್ಶಿಸುವಂತೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.
ಡಿವೈಎಸ್ಪಿ ಪರಮೇಶ್ವರ ನಾಯಕ್ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ಸರ್ಕಾರಕ್ಕೆ ಕಳಂಕ ತಟ್ಟುತ್ತದೆ. ಸಚಿವರು ಕಾಂಗ್ರೆಸ್ ಪಕ್ಷವನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ರೆಡ್ಡಿಗಳ ವಿರುದ್ಧ ಪಾದಯಾತ್ರೆ ಮಾಡಿದ್ರಿ, ಈಗ ಅದಕ್ಕಿಂತ ಹೇಗೆ ಕಡಿಮೆಯಾಗಿದೆ ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.
ಅನುಪಮ ಶೆಣೈ ತಮ್ಮ ಫೋನ್ ಕರೆ ಸ್ವೀಕರಿಸಲಿಲ್ಲವಾದ್ದರಿಂದ ವರ್ಗ ಮಾಡಿದ್ದಾಗಿ ಸಚಿವ ಪರಮೇಶ್ವರ ನಾಯಕ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರಿಂದ ವಿವಾದ ಉದ್ಭವಿಸಿತ್ತು. ಪರಮೇಶ್ವರ್ ನಾಯಕ್ ಅವರು ಅಕ್ರಮ ಮರಳುಸಾಗಾಣಿಕೆ ದಂಧೆಗೆ ಸಹಕರಿಸದಿರುವ ಇನ್ನೂ ಕೆಲವು ಅಧಿಕಾರಿಗಳನ್ನು ವರ್ಗ ಮಾಡಿಸಿದ ಆರೋಪ ಕೇಳಿಬಂದಿತ್ತು.