ಇಂದು ರಾಜ್ಯಾದ್ಯಂತ ರಾಜ್ಯೋತ್ಸವ ಸಂಭ್ರಮ. ಆದರೆ ಗುಲಬರ್ಗಾದಲ್ಲಿ ಪ್ರತ್ಯೇಕ ಹೈದರಾಬಾದ್- ಕರ್ನಾಟಕ ರಾಜ್ಯದ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ವ್ಯಕ್ತವಾಯಿತಲ್ಲದೇ ಪ್ರತ್ಯೇಕ ಧ್ವಜಾ ರೋಹಣ ಮಾಡುವ ಪ್ರಯತ್ನವೂ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಗುಲಬರ್ಗಾದ ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಧ್ವಜಾರೋಹಣದ ನೇತೃತ್ವ ವಹಿಸಿದ ರಾಜು ಕುಲಗೇರಿ ಎಂಬುವವರನ್ನು ಸೇರಿದಂತೆ ಐವರನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಯಾವುದೇ ಕಾಯಿದೆ, ಕ್ರಮಗಳು, ಯೋಜನೆಗಳು ಜಾರಿಯಾಗಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಈ ವಿಭಾಗದ ಕುರಿತು ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಆದ್ದರಿಂದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಕರ್ನಾಟಕ ರಾಜ್ಯ ರಚನೆ ಅನಿವಾರ್ಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.