ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಪ್ರಕರಣದ 19 ಆರೋಪಿ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯ, ಇಂದು ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿತು.
ನ್ಯಾಯಾಲಯ ಶಾಸಕರಿಗೆ ವಿಧಿಸಿರುವ ಷರತ್ತುಗಳು:
ಪ್ರತೀ ಶನಿವಾರ ಸಿಬಿಐ ಕಚೇರಿಗೆ ಆಗಮಿಸಿ ಸಹಿ ಹಾಕಬೇಕು.
ಇಬ್ಬರು ವ್ಯಕ್ತಿಗಳಿಂದ ವೈಯಕ್ತಿಕ ಶ್ಯೂರುಟಿ ನೀಡಬೇಕು.
ವಿಚಾರಣೆ ವೇಳೆ ತನಿಖೆಗೆ ಸಹಕರಿಸಬೇಕು.
10 ಲಕ್ಷ ಮೌಲ್ಯದ ಬಾಂಡ್ನ್ನು ಠೇವಣಿಯಾಗಿಡಬೇಕು.
ಸಿಬಿಐ ಅಧಿಕಾರಿಗಳು ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕಚೇರಿಗೆ ಬಂದಿದ್ದ ವೇಳೆ ಶಾಸಕರನ್ನು ಜುಲೈ 15ರಂದು ಬಂಧಿಸಿದ್ದರು.
ಇನ್ನು 2010ರಲ್ಲಿ ಕಂಪನಿಯೊಂದರ ಮೂಲಕ 15000 ಟನ್ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾರೆ ಎಂಬ ಆರೋಪ ಶಾಸಕರ ಮೇಲಿದೆ.