ಮಾಜಿ ಸಿಎಂ ಮತ್ತು ಹಾಲಿ ಸಿಎಂಗಳ ನಡುವಿನ ವಾಚ್ ಜಟಾಪಟಿ ಮುಂದುವರೆದಿದ್ದು ಕುಮಾರಸ್ವಾಮಿಯವರು ಪ್ರಸ್ತಾಪಿಸುತ್ತಿರುವ ವಾಚ್ನ್ನು ಈಗಲೇ ಅವರಿಗೆ ಮಾರಲುಸಿದ್ಧ, ಅದನ್ನು ಕೊಳ್ಳಲು ಕುಮಾರಸ್ವಾಮಿ ತಯಾರಿದ್ದಾರಾ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡುತ್ತಿದ್ದ ಅವರು, ಈ ವಾಚ್ ಯಾರೋ ಗಿಫ್ಟ್ ಕೊಟ್ಟಿದ್ದು. ಬೇಕಾದ್ರೆ ಈಗಲೇ ಕೊಟ್ಟು ಬಿಡ್ತೀನಿ, ಕನ್ನಡಕವನ್ನೂ ಕೊಡ್ತೀನಿ, ಕುಮಾರಸ್ವಾಮಿ 5 ಲಕ್ಷಕ್ಕೆ ತೆಗೆದುಕೊಳ್ತಾರಾ ಅಂತ ಮತ್ತೆ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿಯವರು ತಮ್ಮ ಮಗನಿಗೆ ಕೋಟ್ಯಾಂತರ ರೂಪಾಯಿ ಕಾರು ಕೊಡಿಸಿದ್ದಾರೆ? ಅದು ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ? ಅಲ್ಲದೆ ಅವ್ರ ಮಗನ ಸಿನಿಮಾಕ್ಕೆ ಕೋಟ್ಯಾಂತರ ರೂಪಾಯಿ ಸುರಿಯುತ್ತಿದ್ದಾರೆ. ಅದು ಅವನು ದುಡಿದಿದ್ದಾ? ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಅಂತಾ ಹೆಚ್ಡಿಕೆ ವಿರುದ್ಧ ಸಿಎಂ ಕಿಡಿಕಾರಿದ್ದಾರೆ.
ಹಲವು ದಿನಗಳಿಂದ ನಡೆಯುತ್ತಿರುವ ಸಿದ್ದರಾಮಯ್ಯ ವಾಚ್ ವಿವಾದಕ್ಕೆ ನಿನ್ನೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ಮಾಜಿ ಸಿಎಂ ಕುಮಾರ ಸ್ವಾಮಿಯವರು ಆರೋಪಿಸಿದಂತೆ ದುಬಾರಿ ಬೆಲೆಯ ವಾಚ್ನ್ನು ನಾನು ಕಟ್ಟುತ್ತಿಲ್ಲ ಎಂದು ಸಿದ್ದರಾಮಯ್ಯ ವಾದಿಸಿದ್ದರು. ಆದರೆ ಅವರು ಕೈಯ್ಯಿಗೆ ಕಟ್ಟುವ ವಾಚ್ ವಜ್ರಖಚಿತವಾಗಿದ್ದು ಅದು 50 ರಿಂದ 70 ಲಕ್ಷ ಬೆಲೆ ಮೌಲ್ಯವುಳ್ಳದ್ದು ಎಂಬುದು ಈಗ ಖಚಿತವಾಗಿದೆ. ಇದು ದುಬಾರಿ ವಾಚ್ ತಯಾರಿಸುವ ಹ್ಯೂಬ್ಲೋಟ್ ಕಂಪನಿ ವಾಚ್ ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ ಎಂದು ನಿನ್ನೆ ಬೀದರ್ನಲ್ಲಿ ಕುಮಾರಸ್ವಾಮಿ ಹೇಳಿದ್ದರು.
ತಾವು ಲೋಹಿಯಾ ಸಿದ್ಧಾಂತವನ್ನು ನಂಬಿದವನೆಂದು ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಐಶಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಬಾಯಲ್ಲಿ ಮಾತ್ರ ಅವರು ಹೋರಾಟಗಾರರು. ಹಿಂದಿನ ಲೋಹಿಯಾವಾದಿ ಸಿದ್ದರಾಮಯ್ಯ ಅಲ್ಲ. ಅವರು ಕೇವಲ ಕಾಂಗ್ರೆಸ್ ಮನೋಭಾವದ ಸಿಎಂ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು.