ಮೈಸೂರು ರಾಜಮನೆತನ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ರಾಣಿ ಪ್ರಮೋದಾದೇವಿ ಹೇಳಿಕೆ ನೀಡಿದ್ದು, ನಾನು ಸರ್ಕಾರವನ್ನು ಬ್ಲಾಕ್ಮೇಲ್ ಮಾಡಿಲ್ಲ, ಅರಮನೆಯ ಹೊರಗೆ ಕಾರ್ಯಕ್ರಮಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಎಂದು ತಿಳಿಸಿದ್ದಾರೆ. ರಾಣಿ ಪ್ರಮೋದಾ ದೇವಿ ಅವರನ್ನು ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಶಾಸಕ ವಾಸು ಭೇಟಿ ಮಾಡಲು ಅರಮನೆಗೆ ತೆರಳಿದ್ದರು.
ದಸರಾ ಸಿದ್ಧತೆ ಬಗ್ಗೆ ರಾಣಿ ಜೊತೆ ಅವರು ಮಾತುಕತೆ ನಡೆಸಿದರು. ದಸರಾಗೆ ಸಂಬಂಧಿಸಿದಂತೆ ಕೆಲವು ವಿಚಾರಗಳಲ್ಲಿ ಅಸಮಾಧಾನವಿದ್ದು, ಅವುಗಳ ನಿವಾರಣೆಗೆ ಶ್ರೀನಿವಾಸ್ ಪ್ರಸಾದ್ ಭೇಟಿ ನಡೆಯಿತು. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಪ್ರಮೋದಾ ದೇವಿ ಮತ್ತು ಸಚಿವ ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಠಿ ನಡೆದಿದ್ದು, ಸರ್ಕಾರದ ಆಹ್ವಾನವನ್ನು ಪ್ರಮೋದಾ ದೇವಿ ಒಪ್ಪಿಕೊಂಡಿದ್ದಾರೆ. ಅಂಬಾರಿ ಕೊಡುವುದಿಲ್ಲವೆಂದು ಹೇಳಿಲ್ಲ.
ಇತಿಹಾಸಜ್ಞರು ಗೊಂದಲ ಸೃಷ್ಟಿಸಿದ್ದಾರೆ. ಶ್ರೀಕಂಠದತ್ತ ನರಸಿಂಹ ರಾಜ್ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯುವುದು ಬೇಡವೆಂದು ನಾನು ಹೇಳಿದ್ದೇನೆಯೇ ಹೊರತು ಅರಮನೆಯ ಹೊರಗೆ ದಸರಾ ಕಾರ್ಯಕ್ರಮಕ್ಕೆ ತಮ್ಮ ವಿರೋಧವಿಲ್ಲ, ನಾನು ಸರ್ಕಾರವನ್ನು ಬ್ಲಾಕ್ಮೇಲ್ ಮಾಡಿಲ್ಲ ಎಂದು ಪ್ರಮೋದಾ ದೇವಿ ಹೇಳಿದ್ದಾರೆ. ಈ ನಡುವೆ ಅರಮನೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಕಾರ್ಯಕ್ರಮ ನಡೆಸುವುದಾಗಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದು, ಈ ಮೂಲಕ ದಸರಾ ಕಗ್ಗಂಟು ಸುಖಾಂತ್ಯಗೊಂಡಿದೆ.