ಅದೆಷ್ಟೋ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದಿದ್ದೇನೆ. ಕಾಡಿನಲ್ಲಿ ಅಲೆಯುವಾಗ ಕಾಡೆಮ್ಮೆ, ಹಾವುಗಳು ಎದುರಾದವು. ಜೀವ ಭಯದಿಂದ ತಿರುಗುತ್ತಿದ್ದೆ. ಚಾರಣಕ್ಕೆ ತೆರಳಿದ್ದ 14 ಟೆಕ್ಕಿಗಳ ನಾಪತ್ತೆ ಪ್ರಕರಣದಲ್ಲಿ 13 ಟೆಕ್ಕಿಗಳು ಸಿಕ್ಕಬಳಿಕ ಬಾಲಾಜಿ ಎಂಬ ಟೆಕ್ಕಿ ಕೂಡ ಹಿಂತಿರುಗಿ ಬಂದಿದ್ದು, ಕಾಡಿನಲ್ಲಿ ಕಳೆದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಕಾಡಿನಿಂದ ಮರಳಿ ಬಂದಿದ್ದು ತನಗೆ ಪುನರ್ಜನ್ಮವಾಗಿದೆ.
ಮರದಡಿ ಸುರಕ್ಷಿತವಾಗಿ ಮಲಗುತ್ತಿದ್ದೆ. ಜಿಪಿಎಸ್ ಬಳಸಿ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಬಳಿಕ ಜಿಪಿಎಸ್, ಮೊಬೈಲ್ ಸ್ವಿಚ್ಆಫ್ ಆದವು. ದಿಕ್ಕು ತೋಚದೇ ನೂರಾರು ಕಿಲೋ ಮೀಟರ್ ಅಲೆದಿದ್ದೇನೆ. ಅನೇಕ ಬೆಟ್ಟ, ಗುಡ್ಡಗಳನ್ನು ಹತ್ತಿ ಇಳಿದಿದ್ದೇನೆ. ಅನೇಕ ತೊರೆಗಳನ್ನು ದಾಟಿದ್ದೇನೆ. ದಿನವೂ ಜೀವ ಭಯದಿಂದ ಕಾಲ ನೂಕುತ್ತಿದ್ದೆ. ಆದರೆ ಇಂದು ನಾನು ಬದುಕುಳಿಯಲಾರೆ ಎನ್ನಿಸಿತ್ತು. ನನ್ನ ತಂದೆ, ತಾಯಿ ಪುಣ್ಯದಿಂದ ಬದುಕುಳಿದಿದ್ದೇನೆ.
ಬಿಸಿಲೆ ರಕ್ಷಿತಾರಣ್ಯದಲ್ಲಿ ನಾಪತ್ತೆಯಾಗಿದ್ದ ಚೆನ್ನೈನ ಇನ್ಫೋಸಿಸ್ ಉದ್ಯೋಗಿ ಬಾಲಾಜಿ ತಂದೆಯನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಪ್ರವೇಶಿಸಿದ ತಪ್ಪಿಗೆ ಕ್ಷಮೆಯಾಚಿಸಿದರು.